ರೋಟರಿ ಕ್ಲಬ್ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ, ಸನ್ಮಾನ
ಕನ್ನಡವನ್ನು ಪ್ರತಿನಿತ್ಯ ಬಳಸಿದರೆ ಕನ್ನಡ ತಾನಾಗಿಯೇ ಉಳಿಯುತ್ತದೆ ಎಂದು ನರಸಿಂಹರಾಜಪುರದ ವೈದ್ಯ ಡಾ.ಸುರೇಶ್ ಕುಮಾರ್ ತಿಳಿಸಿದರು.
ರೋಟರಿ ಕ್ಲಬ್ ಆಶ್ರಯದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ , ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷೆ ಸಂಹವನಕ್ಕಾಗಿ ಬಳಸುವ ಮಾಧ್ಯಮವಾಗಿದೆ. ಕನ್ನಡ ಭಾಷೆಯನ್ನು ಪ್ರತಿಕ್ಷಣವೂ ಕೂಡ ತಪ್ಪಾಗಿ ಬಳಸಿ ಕೊಲ್ಲುತ್ತಿದ್ದೇವೆ ಎಂದು ವಿಷಾಧಿಸಿದರು.ಕನ್ನಡ ಭಾಷೆ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಸಾಧನವಾಗಿದೆ. ಕನ್ನಡವನ್ನು ಉಳಿಸುವುದೂ ಬೇಡ, ಬೆಳೆಸುವುದೂ ಬೇಡ, ಕನ್ನಡವನ್ನು ಪ್ರತಿ ನಿತ್ಯ ಮಾತನಾಡುತ್ತಾ ಬಂದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜ್ಞಾನಗಂಗೋತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎ.ಶ್ರೀಕಾಂತ್ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವಿದೆ. ಕನ್ನಡ ಭಾಷೆಗೆ ಅತೀ ಹೆಚ್ಚು ಅಂದರೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಆದರೆ, ಕನ್ನಡನಾಡಿನಲ್ಲಿ ಕನ್ನಡವನ್ನು ಉಳಿಸಲೆಂದೇ ಕನ್ನಡ ಕಾವಲು ಸಮಿತಿ ಇರುವುದು ವಿಷಾದದ ಸಂಗತಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು.