ಕನ್ನಡಿಗರು ಗಟ್ಟಿ ಧ್ವನಿಯಲ್ಲಿ ಪ್ರಭುತ್ವವನ್ನು ಪ್ರಶ್ನಿಸಬೇಕು

KannadaprabhaNewsNetwork |  
Published : Feb 21, 2026, 02:30 AM IST
ಸಮ್ಮೇಳನಾಧ್ಯಕ್ಷರು  | Kannada Prabha

ಸಾರಾಂಶ

ಈಗಲೂ ಕನ್ನಡದ ಶ್ರೇಷ್ಠ ಬರಹಗಾರರ ಕೃತಿಗಳು ಮಾರಾಟಗೊಳ್ಳುತ್ತಿವೆ. ಅಂದರೆ ಡಿಜಿಟಲ್ ಯುಗದಲ್ಲೂ ಮುದ್ರಣದ ಪ್ರತಿಗಳು ಮಾರಾಟವಾಗುತ್ತಿವೆ.

ಎ.ಜಿ.ಕಾರಟಗಿ ಕಾರಟಗಿ

ತಾಲೂಕಿನ ಮರಲಾನಹಳ್ಳಿಯಲ್ಲಿ ಇಂದು ಕನ್ನಡದ ಜಾತ್ರೆ ನಡೆಯಲಿದೆ. ಈ ಭಾಗದ ಕನ್ನಡ ಪಂಡಿತರು, ಜತೆಗೆ ತತ್ವಪದಗಳ ಕ್ಷೇತ್ರ ಕಾರ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ ಡಾ.ಸಿ.ಬಿ.ಚಿಲ್ಕರಾಗಿ ಕಾರಟಗಿ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

2022ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಗಮನ ಸೆಳೆದ ತಿಳಿವಳಿಕೆ ಬಯಲು, ನೂರೆಂಟು ನಾಯಿ ಬೊಗಳಿದರೇನು, ಪಣತಿ ಮತ್ತು ಮಹಾನವಮಿ, ಎಲ್ಲಿತ್ತು ಈ ಮೊದಲು ಎಲ್ಲಿಂದ ಬಂತವ್ವ ಹಾಗೂ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಸೂರ್ಯ ಕಂದೀಲು ಹಿಡಿದು ಬರಲಿ, ಎನ್ನುವಂತ ಕೃತಿಗಳ ಜತೆಗೆ ಬೆಟ್ಟದೂರ ಅಲ್ಲಮ ಜೀವನಚರಿತ್ರೆ, ಅಭಿನಂಧನಾ ಗ್ರಂಥಗಳನ್ನು ಡಾ. ಚಿಲ್ಕರಾಗಿ ಅವರು ರಚಿಸಿದ್ದಾರೆ. ಅವರೊಂದಿಗೆ ಕನ್ನಡಪ್ರಭ ನಡೆಸಿದ ಸಂದರ್ಶನ. ‌‌‌

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ನಿಮ್ಮ ಅನಿಸಿಕೆ:

ಬಹಳ ಖುಷಿಯಾಗಿದೆ, ಒಬ್ಬ ಸಾಮಾನ್ಯ ಮನೆತನದವ, ಸಾಹಿತ್ಯ ಹಿನ್ನೆಲೆ ಇಲ್ಲದಿದ್ದರೂ ನನ್ನ ಸೇವೆ ಗಮನಿಸಿದ್ದು ಖುಷಿಯಾಗಿದೆ, ನಿಮ್ಮ ಬರವಣಿಗೆ ಜರ್ನಿ ಶುರವಾಗಿದ್ದು ಹೇಗೆ ? ನಿಮ್ಮನ್ನು ಹೆಚ್ಚು ಪ್ರಭಾವಿಸಿದ ಕವಿ / ಬರೆಹಗಾರು ಯಾರು, ಏಕೆ ?

ನಾನು ಎಸ್ಸೆಸ್ಸೆಲ್ಸಿ ಇದ್ದಾಗ ಎಸ್.ಜಿ.ಚೆನ್ನಹಳ್ಳಿ ಕಾವ್ಯ, ಸಾಹಿತ್ಯದ ಮಾತು, ವಿಚಾರಗಳು ನನ್ನನ್ನು ಪ್ರಭಾವಿಸಿದ್ದವು. ಮುಂದೆ ವಿ.ಎಚ್.ನಾಯಕ, ಡಾ ಮಗು ಬಿರಾದಾರ, ಡಾ.ಘಂಟಿ ಮೇಡಂ, ಡಾ ಸಬರದ ಇವರ ಪ್ರಭಾವ ನನ್ನನ್ನು ಬರೆಯಲು ಪ್ರೇರೇಪಿಸಿತು. ನನ್ನ ನೆಚ್ಚಿನ ಕವಿ ಮಹಾಕವಿ ಪಂಪ. ಆತನ ಹಿತಮಿತ ಮೃದು ವಚನಗಳ ರಚನೆಯ ಛಂದಸ್ಸು ಈಗಲೂ ಬೆರಗು ಮತ್ತು ಸೋಜಿಗ, ಕನ್ನಡದ ಪಂಡಿತರೆಲ್ಲ ಒಪ್ಪುವ ಮಾತು ಇದಾಗಿದೆ ಎಂದು ನನ್ನ ಅಧ್ಯಯನದಿಂದ ಕಂಡುಕೊಂಡೆ. ಪರಂಪರೆಯ ತತ್ವಪದ ಆಧುನಿಕ ದೃಷ್ಟಿಕೋನದಿಂದ ವಿಮರ್ಶಿಸುವ ಅಗತ್ಯವಿದೆಯೆ? ಏಕೆ?

ಹೌದು, ಯಾವುದೇ ಸಾಹಿತ್ಯ ಪ್ರಕಾರವಿರಲಿ ಅದು ಆಧುನಿಕ ದೃಷ್ಟಿಕೋನದಿಂದ ನೋಡಬೇಕು, ಅದು ನಮ್ಮ ಬದುಕಿಗೆ ಆಪ್ತವಾದಾಗ ಮಾತ್ರ ಅದು ಉಳಿಯಬಲ್ಲದು ಎನ್ನುವ ತಿಳಿವಳಿಕೆ ನನ್ನದು. ಹಾಗಾಗಿ ತತ್ವ ಪದವನ್ನು ಹಾಗೆ ನೋಡಿದಾಗ, ಜಾಗತೀಕರಣದಿಂದ ಬಂದ ಕೊಳ್ಳು ಬಾಕುತನದಿಂದ ಆಗುವ ದುರಂತ, ಭೌತಿಕ ಸುಖದ ಬೆನ್ನು ಬಿದ್ದು ತಮ್ಮ ಜೀವನ ಕಳೆದುಕೊಳ್ಳುವ ಹುಚ್ಚುತನದ ವಿಡಂಬನೆ, ಪ್ರಭುತ್ವದ ದಾಸ್ಯಬಿಟ್ಟು, ಜನಸಮುದಾಯದ ಹಿತಚಿಂತನೆಗಳ ಮಹತ್ವ ನನಗೆ ಈ ತತ್ವಪದಕಾರರ ಅಧ್ಯಯನದಿಂದ ಸಿಕ್ಕಿವೆ. ಡಿಜಿಟಲ್ ಯುಗದಲ್ಲಿ ಕನ್ನಡ ಸಾಹಿತ್ಯದ ಭವಿಷ್ಯ ಹಾಗೂ ಪುಸ್ತಕ ಸಂಸ್ಕೃತಿ ನೀವು ಹೇಗೆ ನೋಡುತ್ತೀರಿ?

ಈಗಲೂ ಕನ್ನಡದ ಶ್ರೇಷ್ಠ ಬರಹಗಾರರ ಕೃತಿಗಳು ಮಾರಾಟಗೊಳ್ಳುತ್ತಿವೆ. ಅಂದರೆ ಡಿಜಿಟಲ್ ಯುಗದಲ್ಲೂ ಮುದ್ರಣದ ಪ್ರತಿಗಳು ಮಾರಾಟವಾಗುತ್ತಿವೆ. ಆದರೆ ಆಗಬೇಕಾದ ಪ್ರಮಾಣದಲ್ಲಿ ಆಗುತ್ತಿರಲಿಕ್ಕಿಲ್ಲ, ಆದರೆ ಆಶಾವಾದವೇ ಎಲ್ಲದಕ್ಕೂ ಮದ್ದು. ಇಲ್ಲಿವರೆಗೆ ರಚಿಸಿದ ಕತೆ, ಕವನ ಈಗಿನ ಯುವಜನತೆ ನೋಡುತ್ತಿಲ್ಲ, ಆದರೂ ಚುಟುಕು ಸಾಹಿತ್ಯ ಬಹಳ ಪ್ರಚಾರ ಪಡೆದುಕೊಳ್ಳುತ್ತಿದೆ. ಕಲ್ಯಾಣ ಕರ್ನಾಟಕದ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತ ತಮ್ಮ ನಿಲುವೇನು? ಕೆಪಿಎಸ್ ಹೆಸರಿನಲ್ಲಿ ಸಣ್ಣಸಣ್ಣ ಶಾಲೆಗಳಿಗೆ ಬೀಗ ಜಡಿಯುವ ಕಾರ್ಯ ಶುರುವಾಗಿದೆ ಇದು ಸರಿಯೇ? ಅವುಗಳ ಶ್ರೇಯೋಭಿವೃದ್ಧಿಗೆ ಏನೆಲ್ಲ ಕಾರ್ಯಯೋಜನೆ ರೂಪಿಸಬಹುದು ?

ನಾನು ಈಗಾಗಲೇ ಪ್ರಸ್ತಾಪಿಸಿದಂತೆ ಪ್ರಭುತ್ವವೆ ಕೆಲ ಸಾರೆ ದೃಢ ನಿರ್ಧಾರ ಕೈಗೊಳ್ಳಬೇಕು. ಬಹುತೇಕ ರಾಜಕೀಯ ಪಕ್ಷಗಳು ನಾಡ ಹಿತ ಮರೆತು ತಮ್ಮ ಓಟ್ ಬ್ಯಾಂಕ್ ಬೆನ್ನು ಹತ್ತಿದ್ದರಿಂದ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಸೋತಿವೆ. ಈಗಾಗಲೇ ಅರಸ್, ಜೆ.ಎಚ್. ಪಟೇಲ್ ಅಂತಹ ಧೀಮಂತರು ಕನ್ನಡದ ಜವಾಬ್ದಾರಿ ನಿರ್ವಹಿಸಿದ್ದಾರೆ, ಕನ್ನಡದ ಮತದಾರರು, ತಮಿಳರಂತೆ, ಮರಾಠರಂತೆ ಎಚ್ಚರಗೊಂಡರೆ ಪ್ರಭುತ್ವ ಕನ್ನಡದ ಕೆಲಸ ಮಾಡುವುದರಲ್ಲಿ ಹಿಂದೆ ಬೀಳಲಾರದು. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಸಂಘಟನೆಗಳು ಯಾವ ಕ್ರಮ ಕೈಗೊಳ್ಳಬೇಕು?

ಕನ್ನಡದ ಜವಾಬ್ದಾರಿ ಮರೆಯುವ ಪ್ರಭುತ್ವದ ಕಿವಿಹಿಂಡುವ ಕೆಲಸ ಮಾಡಬೇಕು. ಸಂಘಟನೆಗಳು ಪಕ್ಷಾತೀತವಾಗಿ ಜನಹಿತ ಮರೆಯಬಾರದು. ಸರ್ಕಾರ ಪ್ರಜ್ಞಾವಂತರ, ಚಿಂತಕರ ಮಾತು ಕೇಳಿಸಿಕೊಳ್ಳಬೇಕು. ಕನ್ನಡಾಭಿಮಾನಿಗಳಿಗೆ ನೀವು ನೀಡಲು ಬಯಸುವ ಸಂದೇಶವೇನು?

ಅಭಿಮಾನ ಕನ್ನಡಿಗರಲ್ಲಿ ಇಲ್ಲ ಎಂದು ಕನ್ನಡಿಗರಾದ ನಾವು ಅಂದುಕೊಳ್ಳುವಂತಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ, ನಮ್ಮ ನದಿ, ಪ್ರದೇಶ, ಭಾಷೆಯ ಬಗ್ಗೆ ಆಗಾಗ್ಗೆ ನಮ್ಮ ಸುತ್ತಮುತ್ತಲಿನ ರಾಜ್ಯಗಳು ಅನಾವಶ್ಯಕ ತಂಟೆ ತೆಗೆದಾಗಲೂ ಕನ್ನಡಿಗರು ಮೌನವಹಿಸುತ್ತಾರೆ ಎಂಬ ಮಾತು ಎಷ್ಟೋ ಸಾರೆ ಖರೆ ಅನಿಸಿದೆ, ಪರರದ್ದನ್ನು ಬಯಸದ ನಾವು, ನಮ್ಮದನ್ನು ಕಸಿದು ಕೊಳ್ಳುವಾಗಲೂ ಮೌನವಾದರೆ ಹೇಗೆ? ಅದಕ್ಕೆ ಕನ್ನಡದ ಅಭಿಮಾನಿಗಳು ಈ ರೀತಿಯ ಅನಾವಶ್ಯಕ ತಂಟೆ ತಕರಾರುಗಳಿಗೆ ಪ್ರತಿಭಟನೆ, ಕಾನೂನಾತ್ಮಕ ಹೋರಾಟ ಅವಶ್ಯಕ ಎಂದು ನನ್ನ ಅನಿಸಿಕೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಧ ವಧುವಿಗೆ ಬಾಳುಕೊಟ್ಟ ವರ
ಸುತ್ತೋಲೆ ಇಲ್ಲದೇ ಕೈತೋಟದ ಸಸಿಗಳ ಹಣ ಪಾವತಿಗೆ ವಿರೋಧ