- ಕರಗಣೆ ನವೀನ್, ಶಂಕರೇಗೌಡ ಸೇರಿದಂತೆ ರೈತರ ಜಮೀನುಗಳಿಗೆ ದಾಳಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಪಂ ಹಾಗೂ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಮಿತಿ ಮೀರಿದ್ದು, ರೈತರ ಜಮೀನನ್ನು ಅಪಾರ ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ.
ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಕರಗಣೆ ಗ್ರಾಮದ ನವೀನ್, ಶಂಕರೇಗೌಡ ಸೇರಿದಂತೆ ಹಲವು ರೈತರ ಜಮೀನುಗಳಿಗೆ ಕಾಡಾನೆ ರಾತ್ರಿ ವೇಳೆ ದಾಳಿ ನಡೆಸಿ ಅಡಕೆ, ಕಾಫಿ, ತೆಂಗು, ಬಾಳೆ ತೋಟಗಳನ್ನು ನಾಶ ಮಾಡುತ್ತಿವೆ. ರೈತರ ನೂರಾರು ಅಡಕೆ ಮರಗಳು ಧರೆಗುರುಳಿವೆ.ಕಾಡಾನೆ ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ರೈತರಲ್ಲಿ ಆತಂಕ ಎದುರಾಗಿದೆ. ಬನ್ನೂರು ಗ್ರಾಪಂ ವ್ಯಾಪ್ತಿಯ ಕುಂಬ್ರಮನೆ ಶಯನ್ ಎಂಬುವರ ತೋಟಕ್ಕೆ ಸೋಮವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಅಡಕೆ ಮರ, ಬಾಳೆಗಿಡ ಗಳನ್ನು ತುಳಿದು ಹಾಳು ಮಾಡಿವೆ. ಇಲ್ಲಿ ನಿರಂತರ ಕಾಡಾನೆ ಹಾವಳಿ ಹೆಚ್ಚಿದ್ದು, ರೈತರಿಗೆ ಅಪಾರ ನಷ್ಟ ಸಂಭವಿಸಿದೆ. --- (ಬಾಕ್ಸ್)---
ಆನೆ ಸ್ಥಳಾಂತರಕ್ಕೆ ಮನವಿಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆ ಸ್ಥಳಾಂತರಕ್ಕೆ ಗ್ರಾಮಸ್ಥರು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಹುಯಿಗೆರೆ ಗ್ರಾಪಂನ ಕರಗಣೆ, ಅಂಡವಾನೆ, ಮಣಬೂರು, ಬಿಕ್ಕರಣೆ, ಸಾರಗೋಡು ಗ್ರಾಮಗಳಲ್ಲಿ ಕಳೆದ ಒಂದು ವರ್ಷ ದಿಂದ ಕಾಡಾನೆಗಳು ನಿತ್ಯ ಜಮೀನಿಗೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ಸಣ್ಣ, ಅತೀ ಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅಲ್ಲದೆ, ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿ ನಮ್ಮ ಕೈಗೆ ಸಿಗುತ್ತಿಲ್ಲ. ರೈತರ ಬದುಕು ಬೀದಿ ಪಾಲಾಗುವ ಆತಂಕ ಎದುರಾಗಿದೆ. ಎಲೆಕಲ್ಲು, ಹುಯಿಗೆರೆ ಮಾರ್ಗದ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಚಾಲಕರು ಸಂಚಾರ ಮಾಡಲು ಭಯ ಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿ ಸಿದ್ದಾರೆ.೨೩ಬಿಹೆಚ್ಆರ್ ೬: ಬಾಳೆಹೊನ್ನೂರು ಸಮೀಪದ ಹುಯಿಗೆರೆ ಗ್ರಾಪಂನ ಕರಗಣೆಯಲ್ಲಿ ರೈತ ನವೀನ್ ಅವರ ತೋಟದಲ್ಲಿ ಕಾಡಾನೆ ದಾಳಿಗೆ ಧರೆಗುರುಳಿರುವ ಅಡಕೆ ಮರ.
೨೩ಬಿಹೆಚ್ಆರ್ ೭: ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಪಂ ವ್ಯಾಪ್ತಿಯ ಕುಂಬ್ರುಮನೆಯ ಶಯನ್ ಎಂಬುವರ ತೋಟಕ್ಕೆ ಕಾಡಾನೆ ದಾಳಿ ಮಾಡಿ ಬೆಳೆ ನಷ್ಟ ಮಾಡಿರುವುದು.