ಸಿರಗಳಲೆಯ ಕಾರಳ್ಳಿ ಪಟ್ಟಣದಿಂದ ಕೇವಲ 2 ಕಿ.ಮೀ.ದೂರದ ಗ್ರಾಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ಸಿರಗಳಲೆ ಗ್ರಾಮದ ಕಾರಳ್ಳಿಯ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ನಡು ರಸ್ತೆಯಲ್ಲೇ ಬಾಳೆ ಗಿಡ ನೆಟ್ಟು ಬುಧವಾರ ಪ್ರತಿಭಟನೆ ನಡೆಸಿದರು.
ಸಿರಗಳಲೆ ಗ್ರಾಮದ ಕಾರಳ್ಳಿ ಎಂಬ ಹಳ್ಳಿ ಪಟ್ಟಣದಿಂದ ಕೇವಲ 2 ಕಿ.ಮೀ.ದೂರ ಮಾತ್ರ ಇದೆ. ಕಾರಳ್ಳಿಯಲ್ಲಿ ಸಣ್ಣ ರೈತರು, ಕೂಲಿ ಕಾರ್ಮಿಕರು ಸೇರಿದಂತೆ 100ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಜನರು ಪಟ್ಟಣಕ್ಕೆ ಹೋಗಬೇಕಾದರೆ ಕೆರೆ ಏರಿ ದಾಟಿ ಬೆಟಗೇರಿ ಮೂಲಕ ಪಟ್ಟಣಕ್ಕೆ ಹೋಗಬೇಕಾಗಿದೆ. ಆದರೆ, ಆ ಕೆರೆ ಏರಿ ರಸ್ತೆ ಸಂಪೂರ್ಣ ಹಾಳಾಗಿದ್ದು ಕೆಸರುಮಯ ವಾಗಿದೆ. ಅಲ್ಲಲ್ಲಿ ಗುಂಡಿ ಬಿದ್ದಿದೆ. ಮಳೆಗಾಲದಲ್ಲಿ ಆಟೋ, ಕಾರು, ಆ್ಯಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಬರುವುದಿಲ್ಲ. ಪಟ್ಟಣದ ಶಾಲೆಗೆ ಮಕ್ಕಳು ಹೋಗಲು ತೀವ್ರ ತೊಂದರೆಯಾಗಿದೆ. ಮಳೆಗಾಲದಲ್ಲಿ ಕಾಯಿಲೆ ಬಂದರೆ ಪಟ್ಟಣಕ್ಕೆ ವಾಹನದಲ್ಲಿ ಹೋಗಲು ಸಾದ್ಯವಾಗುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಗ್ರಾಪಂ ಮಾಜಿ ಸದಸ್ಯೆ ಭಾಗ್ಯ ಮಾತನಾಡಿ, ಕಳೆದ 80 ವರ್ಷದಿಂದ ಕಾರಳ್ಳಿಯಲ್ಲಿ ನೂರಾರು ಕುಟುಂಬದವರು ವಾಸ ಮಾಡುತ್ತಿ ದ್ದಾರೆ. ಆದರೆ, ರಸ್ತೆ ದುರಸ್ತಿ ಮಾಡಿಸಿಕೊಡುತ್ತಿಲ್ಲ.15 ವರ್ಷದ ಹಿಂದೆ ಒಮ್ಮೆ ಜಲ್ಲಿ ಹಾಕಲಾಗಿತ್ತು. ಅದು ಸಂಪೂರ್ಣ ವಾಗಿ ಎದ್ದಿದೆ. ರಸ್ತೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಮುಂದಿನ ದಿನಗಳಲ್ಲಿ ಈ ಕೆರೆ ಏರಿ ರಸ್ತೆ ದುರಸ್ತಿ ಮಾಡದಿದ್ದರೆ ಚುನಾವಣಾ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡ ಸುರೇಶ್ ಮಾತನಾಡಿ, ಚುನಾವಣೆ ಬಂದಾಗ ಓಟು ಕೇಳಲು ಎಲ್ಲರೂ ಬರುತ್ತಾರೆ. ಚುನಾವಣೆ ಆದ ನಂತರ ಈ ಕಡೆ ತಲೆ ಹಾಕುವುದಿಲ್ಲ. ನಮ್ಮೂರಿಗೆ ಮಳೆಗಾಲದಲ್ಲಿ ಬರಲು ಅನುಕೂಲವಾಗುವಂತೆ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕಾರಳ್ಳಿ ಗ್ರಾಮಸ್ಥರಾದ ಕುಮಾರ, ಮಂಜು, ಸೈಪುಲ್ಲ, ಗೌರಮ್ಮ, ಶಿಲ್ಪ, ಸಲೀಂ ಮುಂತಾದವರು ಭಾಗವಹಿಸಿದ್ದರು.