ಕಮಲ ಹಾಸನ್‌ ಹೇಳಿಕೆ ಖಂಡಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : May 31, 2025, 12:52 AM IST
30ಎಚ್‌ಪಿಟಿ2- ಹೊಸಪೇಟೆಯಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಪ್ರತಿಭಟನೆ ನಡೆಸಿ ಚಿತ್ರನಟ ಕಮಲ್‌ ಹಾಸನ್‌ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಲಾಯಿತು. | Kannada Prabha

ಸಾರಾಂಶ

ಕನ್ನಡ ಭಾಷೆ ಕುರಿತು ಹಗುರ ಹೇಳಿಕೆ ನೀಡಿದ ತಮಿಳು ಚಿತ್ರ ನಟ ಕಮಲ್‌ ಹಾಸನ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ಹೊಸಪೇಟೆಯ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಕಮಲ್‌ ಹಾಸನ್‌ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆ: ಕನ್ನಡ ಭಾಷೆ ಕುರಿತು ಹಗುರ ಹೇಳಿಕೆ ನೀಡಿದ ತಮಿಳು ಚಿತ್ರ ನಟ ಕಮಲ್‌ ಹಾಸನ್‌ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ನಗರದ ಪುನೀತ್‌ ರಾಜ್‌ಕುಮಾರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜತೆಗೆ ಕಮಲ್‌ ಹಾಸನ್‌ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ಚಿತ್ರನಟ ಕಮಲ್‌ ಹಾಸನ್‌ ಮೊದಲಿನಿಂದಲೂ ಬರೀ ವಿವಾದಾತ್ಮಕ ಹೇಳಿಕೆಗಳನ್ನೆ ನೀಡುತ್ತಿದ್ದಾರೆ. ತಮಿಳಿನಿಂದ ಕನ್ನಡ ಜನಿಸಿದೆ ಎಂದು ಆಧಾರರಹಿತ ಹೇಳಿಕೆ ನೀಡಿದ್ದಾರೆ. ಮೊದಲು ತಮಿಳು ಭಾಷೆ ಹೇಗೆ ಜನಿಸಿತು ಎಂಬುದನ್ನು ಅರಿತುಕೊಳ್ಳಲಿ. ಲಾಬಿ ಮಾಡಿ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಂಡಿದ್ದಾರೆ. ಆದರೆ, ಕನ್ನಡ ಭಾಷೆಗೆ ಅದರ ಪ್ರಾಚೀನತೆ ಗುರುತಿಸಿ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ನಾವು ತಮಿಳಿಗರಂತೆ ಅಂದಾಭಿಮಾನಿಗಳಲ್ಲ, ನಾವು ಭಾಷಾಭಿಮಾನಿಗಳು. ಕನ್ನಡಿಗರ ಉದಾರತೆಯಿಂದಲೇ ದಕ್ಷಿಣ ಭಾರತದ ನಟರು ಬೆಳೆದಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಮೊದಲು ಅರಿತುಕೊಳ್ಳಲಿ. ಕನ್ನಡಕ್ಕೆ ಎಷ್ಟು ಜ್ಞಾನಪೀಠ ದೊರೆತಿದೆ ಮತ್ತು ಬೂಕರ್‌ ಪ್ರಶಸ್ತಿ ದೊರೆತಿದೆ ಎಂಬುದನ್ನು ಅರಿತುಕೊಳ್ಳಲಿ. ಕಮಲ್‌ ಹಾಸನ್ ಹೇಳಿಕೆಯನ್ನು ಕರವೇ ಒಕ್ಕೊರಲಿನಿಂದ ಖಂಡಿಸುತ್ತದೆ. ಈ ಕೂಡಲೇ ಕನ್ನಡಿಗರ ಬೇಷರತ್‌ ಕ್ಷಮೆ ಯಾಚಿಸಬೇಕು. ಈ ನಟ ನಟಿಸಿರುವ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ. ರಾಮಪ್ಪ, ಜಾಕೀರ್‌, ವಿ. ಸೋಮಪ್ಪ, ರಾಮಕೃಷ್ಣ, ಜೆ.ಎಸ್‌. ಸಲೀಂ, ಬಾಷಾ, ಯೋಗ ಲಕ್ಷ್ಮಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ