ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಗೌಡ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಕರಿಕೆ ಗೌಡ ಸಮಾಜದ ಸಮುದಾಯ ಬಾಂಧವರ ಸಭೆಯನ್ನು ಕರಿಕೆಯ ಸಹಕಾರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.ಸಭೆಯಲ್ಲಿ ಸಮಾಜ ನಡೆದು ಬಂದ ಹಾದಿ ಮತ್ತು ಮುಂದಿನ ದಿನಗಳ ಅಭಿವೃದ್ಧಿಯ ಚಿಂತನೆಯ ಬಗ್ಗೆ ಸಾಕಷ್ಟು ಸಲಹೆ ಸೂಚನೆಗಳನ್ನು ಸ್ವೀಕರಿಸಿ ಚರ್ಚಿಸಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಗಡಿ ಭಾಗದ ಸಮಾಜದ ಅಭಿವೃದ್ಧಿಗೆ ಕೆಲವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಕರಿಕೆ ಗೌಡ ಸಮಾಜ ವ್ಯಾಪ್ತಿಯ ಗೌಡ ಮಹಿಳಾ ಒಕ್ಕೂಟವನ್ನು ಮತ್ತು ಯುವ ವೇದಿಕೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಕ್ರಮ ಕೈಗೊಳ್ಳುವಂತೆ ಮತ್ತು ಸಮಾಜಕ್ಕೆ ಲಭ್ಯವಿರುವ, ಖರೀದಿ ಜಾಗವನ್ನು ಪರಿಶೀಲಿಸಿ ಈ ಜಾಗಕ್ಕೆ ಬದಲಿ ವ್ಯವಸ್ಥೆ ಏನಾದರೂ ಲಭ್ಯವಿದ್ದಲ್ಲಿ ಅಕ್ಟೋಬರ್ ತಿಂಗಳ ಒಳಗಡೆ ಸಲಹೆ ಸೂಚನೆಗಳನ್ನು ನೀಡಿ ಪರಾಮರ್ಶಿಸುವಂತೆ ತೀರ್ಮಾನಿಸಲಾಯಿತು. ಯಾವುದೇ ಸಮರ್ಪಕ ಸ್ಥಳ ಲಭ್ಯವಾಗದಿದ್ದಲ್ಲಿ ನವೆಂಬರ್ ತಿಂಗಳ ಮೊದಲ ವಾರದಿಂದಲೇ ಸಮಾಜದ ನಿವೇಶನದ ದಾಖಲೆಗಳ ಕೆಲಸ ಕಾರ್ಯಗಳನ್ನು ಆರಂಭಿಸಲು ತೀರ್ಮಾನಿಸಲಾಯಿತು. ಅದಕ್ಕೆ ಪೂರಕವಾಗಿ ಗೌಡ ಸಮಾಜದ ಕಟ್ಟಡ ನಿರ್ಮಾಣ ಮತ್ತು ಇತರ ಚಟುವಟಿಕೆಗಳಿಗೆ ತಕ್ಷಣದಿಂದಲೇ ಸಂಚಾಲಕರಾಗಿ ಬಿಪಿನ್ ಬೇಕಲ್ ರವರನ್ನು ನೇಮಿಸಲಾಯಿತು.ಈ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ, ಕರಿಕೆ ಸಮಾಜದ ಅಧ್ಯಕ್ಷರಾದ ಕೋಡಿ ಪೊನ್ನಪ್ಪನವರು, ಹಿರಿಯರಾದ ಬೇಕಲ್ ಜಯರಾಮ ಗೌಡರು, ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯರವರು, ಸಲಹಾ ಸಮಿತಿ ಸದಸ್ಯರಾದ ಕೆ ಆರ್ ವಿದ್ಯಾಧರ್ ರವರು, ಒಕ್ಕೂಟದ ಕಾನೂನು ಸಲಹೆಗಾರರಾದ ಕೊಂಬಾರನ ರೋಷನ್ ರವರು, ಕರಿಕೆ ಗೌಡ ಸಮಾಜದ ಉಪಾಧ್ಯಕ್ಷರಾದ ಬೇಕಲ್ ದೇವರಾಜ್ ರವರು, ಕೆಪಿಸಿಸಿ ಸದಸ್ಯರಾದ ಬೇಕಲ್ ರಮನಾಥ್, ಒಕ್ಕೂಟದ ನಿರ್ದೇಶಕರಾದ ಬೇಕಲ್ ಬಿಪಿನ್, ವಕೀಲರಾದ ಕೋಡಿ ನಿರ್ಮಲಾನಂದ ಸೇರಿದಂತೆ ಕರಿಕೆ ಸಮಾಜದ ಸಮುದಾಯ ಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು.