ಕಮಲ್‌ ಹಾಸನ್‌ ಹೇಳಿಕೆ ಖಂಡಿಸಿ ಕರ್ನಾಟಕ ಸೇನಾಪಡೆ ಪ್ರತಿಭಟನೆ

KannadaprabhaNewsNetwork | Updated : May 29 2025, 05:54 AM IST

ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ವಿರುದ್ಧ, ಕರ್ನಾಟಕ ಸೇನಾಪಡೆ ಪದಾಧಿಕಾರಿಗಳು ಮೈಸೂರಿನ ಹಳೆ ಜಿಲ್ಲಾಧಿಕಾರಿ ಎದುರು ಬುಧವಾರ ಪ್ರತಿಭಟಿಸಿದರು.

 ಮೈಸೂರು :  ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ವಿರುದ್ಧ, ಕರ್ನಾಟಕ ಸೇನಾಪಡೆ ಪದಾಧಿಕಾರಿಗಳು ಮೈಸೂರಿನ ಹಳೆ ಜಿಲ್ಲಾಧಿಕಾರಿ ಎದುರು ಬುಧವಾರ ಪ್ರತಿಭಟಿಸಿದರು.

ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ, ಸ್ವತಂತ್ರ ಲಿಪಿ ಹೊಂದಿರುವ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ. ಕನ್ನಡ ಕೋಟ್ಯಂತರ ಕನ್ನಡಿಗರ ಜೀವನಾಡಿ ಆಗಿರುವ ಹೆಮ್ಮೆಯ ಇದೆ. ಆದರೆ, ಕಮಲ್ ಹಾಸನ್ ಅವರು ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿ ಕನ್ನಡ ಭಾಷೆಗೆ ಅವಮಾನಿಸಿರುವುದು ಅತ್ಯಂತ ಖಂಡನೀಯ ಎಂದು ಅಧ್ಯಕ್ಷ ತೇಜಸ್‌ ಲೋಕೇಶ್‌ ಗೌಡ ಕಿಡಿಕಾರಿದರು.

ನಮ್ಮ ಕನ್ನಡ ಭಾಷೆಯಲ್ಲಿ 52 ಅಕ್ಷರಗಳಿವೆ. ಆದರೆ, ತಮಿಳು ಭಾಷೆಯಲ್ಲಿ ಬರೀ 18 ಅಕ್ಷರಗಳಿವೆ. ಕನ್ನಡದ ಬಗ್ಗೆ ಅರಿಯದ, ಭಾಷೆಗಳ ಬಗ್ಗೆ ಜ್ಞಾನ ಇಲ್ಲದ ಕಮಲಹಾಸನ್ ಈ ರೀತಿ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಕನ್ನಡ ಭಾಷೆ ದೇಶದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಬಹುಶಃ ಸಂಸ್ಕೃತ ಬಿಟ್ಟರೆ ಕನ್ನಡ ಭಾಷೆ ಬಹಳ ಪ್ರಾಚೀನ ಭಾಷೆ ಅದಕ್ಕಾಗಿ ನಮ್ಮ ಕನ್ನಡಕ್ಕೆ, ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ, ಇತ್ತೀಚೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಕೂಡ ನಮ್ಮ ಕನ್ನಡಕ್ಕೆ ಸಿಕ್ಕಿದೆ ಎಂಬುವುದನ್ನು ಕಮಲ ಹಾಸನ್ ಅರಿಯಬೇಕಿದೆ ಎಂದರು.

ಈ ಕೂಡಲೇ ಕಮಲ್ ಹಾಸನ್ ಕನ್ನಡಿಗರ ಹಾಗೂ ಕನ್ನಡ ಭಾಷೆಯ ಬಗ್ಗೆ ಕ್ಷಮೆ ಕೋರಬೇಕು. ಇಲ್ಲವಾದ ಪಕ್ಷದಲ್ಲಿ ಮುಂದಿನ ವಾರ ತೆರೆ ಕಾಣಲಿರುವ ಅವರ ಸಿನಿಮಾವನ್ನು ರಾಜ್ಯಾದ್ಯಂತ ಬಹಿಷ್ಕಾರಿಸಿ ಬಿಡುಗಡೆ ಆಗದಂತೆ ತಡೆ ಹಿಡಿಯುತ್ತೇವೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗೋಲ್ಡ್ ಸುರೇಶ್, ಪ್ರಭುಶಂಕರ, ನೇಹಾ, ಬೋಗಾದಿ ಸಿದ್ದೇಗೌಡ, ಕೃಷ್ಣಪ್ಪ, ಗಿರೀಶ್, ಸಿಂಧುವಳ್ಳಿ ಶಿವಕುಮಾರ್, ತಾಯೂರ್ ಗಣೇಶ್, ಹನುಮಂತಯ್ಯ, ಮೂರ್ತಿ ಲಿಂಗಯ್ಯ, ದರ್ಶನ್ ಗೌಡ, ವರಕೂಡು ಕೃಷ್ಣೇಗೌಡ, ರವೀಶ್, ಪ್ರಭಾಕರ್‌, ನಾಗರಾಜಚಾರ್, ಶಿವರಾಂ ಗೌಡ, ರಘು ಅರಸ್, ರಾಮಣ್ಣ ಇದ್ದರು.

Read more Articles on