ಮುಂಡಗೋಡ: ಕನ್ನಡ ಪ್ರತಿಯೊಬ್ಬರಿಗೂ ಆಶ್ರಯ ನೀಡಿದ ಒಂದು ಸುಂದರ ಸ್ವರ್ಗದ ತವರಿದ್ದಂತೆ. ಇಲ್ಲಿ ಎಲ್ಲ ಜಾತಿ, ಧರ್ಮದ ಜನಾಂಗ ಸಹಬಾಳ್ವೆಯಿಂದ ಜೀವನ ಸಾಗಿಸುವುದರಿಂದಲೇ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎನ್ನಲಾಗುತ್ತದೆ ಎಂದು ಮುಂಡಗೋಡ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಹಯೋಗದಲ್ಲಿ ಕನ್ನಡ ಕಾರ್ತಿಕದ ಅಂಗವಾಗಿ ಕನ್ನಡವೇನೆ ಕುಣಿದಾಡವೆನ್ನದೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಘಟಕದ ಅಧ್ಯಕ್ಷ ವಸಂತ ಕೋಣಸಾಲಿ ಮಾತನಾಡಿ, ಕನ್ನಡ ಉಳಿಯಬೇಕಾದರೆ ಅದನ್ನು ಬಳಸಿ ಬೆಳೆಸಬೇಕು. ಪರಭಾಷಿಕರು ಸಿಕ್ಕಾಗ ಅವರ ಭಾಷೆಯಲ್ಲಿ ಮಾತನಾಡದೆ ಕನ್ನಡದಲ್ಲಿ ಮಾತನಾಡಬೇಕು. ಆಗ ಮಾತ್ರ ಕನ್ನಡದ ಅಸ್ಮಿತೆ ಉಳಿಯುತ್ತದೆ ಎಂದರು. ಮಹೇಶ್ ಮಳೇಕರ, ಪ್ರಸನ್ನ ಸಿಂಗ್ ಬಿ. ಹಜೇರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಪರ್ವೀನ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪಿ.ಪಿ. ಛಬ್ಬಿ ಮಾತನಾಡಿದರು. ಇದೇ ವೇಳೆ ಕನ್ನಡದ ಇತಿಹಾಸ ಕುರಿತು ಮಾತನಾಡಿದ ವಿದ್ಯಾರ್ಥಿನಿ ಜ್ಞಾನೇಶ್ವರಿ ದಾನಪ್ಪನವರ ಮಾತುಗಳು ಸಭಿಕರಿಂದ ಮೆಚ್ಚುಗೆ ಪಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್.ಡಿ. ಮುಡೆಣ್ಣವರ, ಕೋಶಾಧ್ಯಕ್ಷ ನಾಗರಾಜ ಅರ್ಕಸಾಲಿ, ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹರಿಜನ್ ಸೇರಿದಂತೆ ಕಾಲೇಜಿನ ಉಪನ್ಯಾಸಕರಾದ ಮಧುಶ್ರೀ ಕೆ. ಮತ್ತು ಅಧ್ಯಾಪಕ ವರ್ಗ ಹಾಗೂ ಸಂಗಪ್ಪ ಕೋಳೂರು, ಎಸ್.ಬಿ. ಹೂಗಾರ, ಚಿದಾನಂದ ಪಾಟೀಲ, ಗೌರಮ್ಮ ಕೊಳ್ಳಾನವರ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.