-ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ -------
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಿವಾಸಿ ಬುಡಕಟ್ಟು ಜನಾಂಗವನ್ನು ಸಂಪೂರ್ಣವಾಗಿ ಸಮಾಜದ ಮುಖ್ಯವಾಹಿನಿಗೆ ತರುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಪ್ರಧಾನಮಂತ್ರಿ ಜನ ಜಾತೀ ಆದಿವಾಸಿ ನ್ಯಾಯ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ 39 ಲಕ್ಷ ಬುಡಕಟ್ಟು ಜನರಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿರುವ ಎಲ್ಲ ಕಾನೂನುಗಳನ್ನು ಬದಿಗೊತ್ತಿ ಆ ಸಮಾಜಕ್ಕೆ ನಾಗರೀಕತೆಯನ್ನು ಪರಿಚ ಮಾಡಿಕೊಡುವ ಮೋದಿಯವರ ಪರಿಕಲ್ಪನೆಯಿಂದ ಹಾಡಿಗಳನ್ನು ಗುರುತು ಮಾಡಿ ಆ ಜನರಿಗೆ ಪಡಿತರ ಚೀಟಿ, ಆಧಾರ ಕಾರ್ಡ್, ಹೆಲ್ತ್ಕಾರ್ಡ್, 4.5೦ ಲಕ್ಷ ರು. ವೆಚ್ಚದ ಮನೆ, ರಸ್ತೆ, ಕುಡಿಯುವ ನೀರು, ಆಸ್ಪತ್ರೆಯಂತಹ ಸೌಲಭ್ಯಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನರೇಂದ್ರಮೋದಿಯವರ ಸರ್ಕಾರ ಬದ್ದವಾಗಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಬುಡಕಟ್ಟು ಕಾಡಂಚಿನಲ್ಲಿರುವ ಜನರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಅರಿವು ನಿಮಗೆ ಇರಬೇಕು. ಓದಿಕೊಂಡು ತಿಳಿದುಕೊಳ್ಳಬೇಕು. ತಮ್ಮ ಹಕ್ಕುಗಳನ್ನು ಕೇಳಬೇಕು. ಗ್ರಾಪಂನಲ್ಲಿ ಮನೆ ಕಟ್ಟಲು 1.5 ಲಕ್ಷ ಕೊಡುತ್ತಾರೆ. ಆದರೆ ಕೇಂದ್ರ ಸರ್ಕಾರ ಬುಡಕಟ್ಟು ಜನರಿಗೆ 4.5 ಲಕ್ಷ ರು. ನೀಡುತ್ತಿದೆ. ಇದರ ಸದುಪಯೋಗವನ್ನು ಬುಡಕಟ್ಟು ಜನರು ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಲ್. ಶ್ರೀನಿವಾಸ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ರಾಜ್ಕುಮಾರ್, ಉಪನಿರ್ದೇಶಕ ಬಿ.ಎಸ್. ಪ್ರಭಾ ಅರಸ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್. ಮುನಿರಾಜು, ಸಂಶೋಧನಾಧಿಕಾರಿ ಎಚ್.ಎಸ್. ಬಿಂದ್ಯಾ, ಕೇಂದ್ರ ಸರ್ಕಾರದ ನೋಡಲ್ಅಧಿಕಾರಿ ದಿಲೀಪ್ಸಾಹೋ, ಟ್ರೈಪೆಡ್ನ್ ಪ್ರಾದೇಶಿಕ ವ್ಯವಸ್ಥಾಪಕ ಸುಬ್ಜೀತ್, ಡಾ. ಮೋಹನ್, ತಾಲೂಕು ಕಲ್ಯಾಣಾಧಿಕಾರಿ ಮಹೇಶ್, ಬಸವರಾಜು, ನಾರಾಯಣಸ್ವಾಮಿ, ಅರುಣ್ಪ್ರಭು, ಚಂದ್ರಶೇಖರ್ ಇದ್ದರು.