ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಅವರ ಪರಿಸ್ಥಿತಿ "ನಾ ಘರ್ ಕಾ, ನಾ ಘಾಟ್ ಕಾ " ಎನ್ನುವಂತಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಕಳೆದ 30 ವರ್ಷಗಳ ಹಿಂದೆ ಶ್ರೀರಾಮನಿಗೆ ಜೈಕಾರ ಹಾಕುತ್ತಿದ್ದ ಶೆಟ್ಟರ ಈಗ ಕಾಂಗ್ರೆಸ್ ಪಕ್ಷಕ್ಕೆ ಹೋದ ನಂತರ ತಮ್ಮ ಭಾವನೆ ಬದಲಾಯಿಸಿಕೊಂಡಿದ್ದಾರೆ. ಪಕ್ಷ ಬದಲಾದವರೂ ಶ್ರೀರಾಮನ ಬಗ್ಗೆ ಇದ್ದ ಅಭಿಮಾನ ಯಾವತ್ತೂ ಬದಲಾಗಬಾರದು ಎಂದು ಟಾಂಗ್ ನೀಡಿದ್ದಾರೆ.
ರಾಮ ಮಂದಿರವನ್ನು ಬಿಜೆಪಿ ರಾಜಕೀಯ ದಾಳವಾಗಿ ಮಾಡಿಕೊಳ್ಳುತ್ತಿದೆ ಎಂಬ ಶೆಟ್ಟರ ಆರೋಪಕ್ಕೆ ಪ್ರತಿಕ್ರಿಸಿ, ಈ ಹಿಂದೆ ಬಿಜೆಯಲ್ಲಿದ್ದಾಗ ಶೆಟ್ಟರಗೆ ಶ್ರೀರಾಮನ ಬಗ್ಗೆ ಅಪಾರವಾದ ಭಕ್ತಿ ಹಾಗೂ ಅಭಿಮಾನವಿತ್ತು. ಆದರೆ, ಕಾಂಗ್ರೆಸ್ಗೆ ಸೇರಿದ ನಂತರ ಅಯೋಧ್ಯೆ ಮತ್ತು ಶ್ರೀರಾಮ ಮಂದಿರದ ಬಗ್ಗೆ ಭಾವನೆ ಬದಲಾಗಿರುವುದು ಖಂಡನೀಯ. ಇಡೀ ದೇಶವೇ ರಾಮ ಮಂದಿರದ ಬಗ್ಗೆ ಉತ್ತಮ ಭಾವನೆ ವ್ಯಕ್ತಪಡಿಸುತ್ತಿದೆ. ಆದರೆ, ಶೆಟ್ಟರ ಕ್ಷುಲ್ಲಕ ಹೇಳಿಕೆಯ ಮೂಲಕ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.ಶೆಟ್ಟರ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ಬಗ್ಗೆ ನಮ್ಮಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಅವರು ಈಗಾಗಲೇ ಕಾಂಗ್ರೆಸ್ಗೆ ಹೋಗಿದ್ದಾರೆ, ಅಲ್ಲಿಯೇ ಆರಾಮವಾಗಿರಲಿ ಎಂದರು.