ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಮೇರು ವ್ಯಕ್ತಿತ್ವದ ಚಿಂತಕ, ಮಹಾಯೋಗಿ ಆಗಿದ್ದವರು ಸಿದ್ದರಾಮೇಶ್ವರರು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದರು.
ಸಕಲ ಜೀವಿಗಳ ನೆಮ್ಮದಿ ಬದುಕಿಗಾಗಿ ಕೆರೆ- ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿದ್ದ ಕರ್ಮಯೋಗಿ ಎಂದೇ ಖ್ಯಾತನಾಮರಾಗಿದ್ದ ಸಿದ್ಧರಾಮರು ಜಾತಿ, ಧರ್ಮವನ್ನು ಮೀರಿದ ಅನುಭಾವಿಗಳು. ಇವರು ಕಾಲಾನಂತರದಲ್ಲಿ ತಮ್ಮ ನಿರಂತರ ಸಾಧನೆಯಿಂದಾಗಿ ಮಹಾಶಿವಯೋಗಿ ಎನಿಸಿದರು ಎಂದರು.
ನಿವೇಶನ ಭರವಸೆ:ಭೋವಿ ಸಮುದಾಯದವರು ತಮ್ಮ ಕಾಯಕದಿಂದಾಗಿ ಚದುರಿಹೋಗಿದ್ದಾರೆ. ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಂಘಟಿತರಾಗಬೇಕಾದ ಅಗತ್ಯವಿದೆ. ಭೋವಿ ಸಮುದಾಯ ಶಕ್ತಿಯುತ ಸಂಘಟನೆಯಾಗಿ ಬೆಳೆದಲ್ಲಿ ಕೋರಿಕೆ -ಬೇಡಿಕೆಗಳ ಈಡೇರಿಕೆಗೆ ಸಹಕಾರಿಯಾಗಲಿದೆ ಎಂದು ಹೇಳಿದ ಅವರು, ಸಮುದಾಯದ ಜನರ ಕೋರಿಕೆಯಂತೆ ಸರ್ಕಾರದಿಂದ ನಿವೇಶನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ಎ.ನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾ ನಾಯ್ಕ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಬೋವಿ ಸಮಾಜ ಅಧ್ಯಕ್ಷ ರವಿಕುಮಾರ್, ತಾಲೂಕು ಅಧ್ಯಕ್ಷ ಜಗದೀಶ್, ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗುರುತಿಸಿ, ನಗದು ಪುರಸ್ಕಾರ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತಿಯನ್ನು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮರು ತಮ್ಮ ಕಾಲಾವಧಿಯಲ್ಲಿ 4-5 ಸಾವಿರ ಶಿಷ್ಯರನ್ನು ಹೊಂದಿದ್ದರು. ಕೆರೆ-ಕಟ್ಟೆ-ಕಾಲುವೆಗಳು, ಗುಡಿ-ಗೋಪುರಗಳ ನಿರ್ಮಾಣ ಕಾರ್ಯದಲ್ಲಿ ಅದ್ವಿತೀಯರಾಗಿದ್ದರು ಎಂದು ಬಣ್ಣಿಸಿದ ಅವರು ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು ಎಂದರು.
ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿ, ಶಿವಶರಣರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.