ಕನ್ನಡಪ್ರಭ ವಾರ್ತೆ ಭಾಲ್ಕಿ
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸ್ವಾತಂತ್ರ್ಯ ನಂತರ ದೇಶ ಕಂಡ ಐದು ಯುದ್ಧಗಳಲ್ಲಿ ಕಾರ್ಗಿಲ್ ಯುದ್ಧ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಈ ಯುದ್ಧದಲ್ಲಿ ಅನೇಕ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಯೋಧರ ತ್ಯಾಗ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು .
ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡುತ್ತೇವೆ. ಈ ವಿಜಯೋತ್ಸವದ ಹಿಂದೆ ಅನೇಕ ಭಾರತೀಯರ ತ್ಯಾಗ-ಬಲಿದಾನವಿದೆ. ದೇಶ ಸೇವೆಗೆ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ಯೋಧರಿಗೆ ಗೌರವಿಸಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಗಿಲ್ ಯುದ್ಧ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದೇಶ ರಕ್ಷಣೆಗಾಗಿ ಮಡಿದ ವೀರ ಸೈನಿಕರ ತ್ಯಾಗ, ಬಲಿದಾನ, ಸಾಹಸ ಅವಿಸ್ಮರಣೀಯ. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ರಕ್ಷಣೆಗಾಗಿ 527 ವೀರ ಯೋಧರು ಹುತಾತ್ಮರಾದರು. ಈ ಯುದ್ಧದಲ್ಲಿ ಸೇನೆಯು ಶತ್ರುಗಳನ್ನು ಸೋಲಿಸಿ ವಿಜಯ ಸಾಧಿಸಿತು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಪತ್ರಕರ್ತರಾದ ಶಶಿಕಾಂತ ಬಂಬುಳಗೆ, ಜಯರಾಜ ದಾಬಶೆಟ್ಟೆ, ಪ್ರಾಚಾರ್ಯ ಭಗವಂತ ರೆಡ್ಡಿ, ನೀಟ್ ವಿಭಾಗದ ಮುಖ್ಯಸ್ಥ ಎಂ.ಎಸ್.ರೆಡ್ಡಿ, ಶಶಿಕುಮಾರ, ಅನಿಲ ಪಾಟೀಲ್, ಗುಂಡಪ್ಪ ಸೇರಿದಂತೆ ಹಲವರು ಇದ್ದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ನಿರೂಪಿಸಿದರು.