ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಭಾನುವಾರ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಿತು.
ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಭಾನುವಾರ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆಯಿತು.
2024-25ನೇ ಸಾಲಿನ ₹4,25,00,127 ಮುಂಗಡ ಆಯ-ವ್ಯಯ ಮಂಡಿಸಿ, ಮಂಜೂರಾತಿ ಪಡೆಯಲಾಯಿತು. ಸಂಘದ ಸಭಾಭವನಗಳ ಬಾಡಿಗೆ, ಮಳಿಗೆಗಳ ಬಾಡಿಗೆ, ಪುಸ್ತಕಗಳ ಮಾರಾಟ, ಸದಸ್ಯತ್ವ ಶುಲ್ಕ, ಬ್ಯಾಂಕ್ ಬಡ್ಡಿ, ಸರ್ಕಾರದಿಂದ ವಾರ್ಷಿಕ ನಿರ್ವಹಣಾ ಹಾಗೂ ಕಾರ್ಯಚಟುವಟಿಕೆ ಅನುದಾನ ಒಳಗೊಂಡಂತೆ ಒಟ್ಟು ₹3,82,50,000 ಆದಾಯ ಮೂಲವನ್ನು ತೋರಿಸಲಾಗಿದೆ. ನಾಡಿನ ಏಕೀಕರಣದಲ್ಲಿ ಭಾಗವಹಿಸಿ ರಾಜ್ಯ ನಿರ್ಮಾಣಕ್ಕೆ ಸೇವೆ ಸಲ್ಲಿಸಿದವರ ಪ್ರತಿ ಜಿಲ್ಲೆಯಲ್ಲಿ ಸ್ಮರಣೆಗಾಗಿ ₹16 ಲಕ್ಷ, ಮಾತೃಭಾಷಾ ಮತ್ತು ಸಮಾನ ಶಿಕ್ಷಣ ಹೋರಾಟದ ಹಾದಿಗಳು ಎರಡು ದಿನದ ನಾಲ್ಕು ವಿಭಾಗ ಮಟ್ಟದಲ್ಲಿ ಚಿಂತನಾ ಸಮಾವೇಶಕ್ಕಾಗಿ ₹10 ಲಕ್ಷ ಹಣ ಮೀಸಲು ಇರಿಸಿ ಮಂಡಿಸಲಾಗಿದೆ.
ಇದರೊಂದಿಗೆ ಒಳನಾಡ ಕನ್ನಡ ಸಂಘಗಳೊಡನೆ ಮುಖಾಮುಖಿ, ಸಂಶೋಧನಾ ಕೇಂದ್ರಕ್ಕೆ ಹೊಸ ಕನ್ನಡ ಗ್ರಂಥಗಳ ಸಂಗ್ರಹಕ್ಕಾಗಿ, ಶಾಲಾ-ಕಾಲೇಜುಗಳಲ್ಲಿ ಹಚ್ಚೇವು ಕನ್ನಡ ದೀಪ ಕಾರ್ಯಕ್ರಮದಂತಹ ಕನ್ನಡ ಜಾಗೃತಿ ಆಂದೋಲನ ಗಡಿ ಪ್ರದೇಶ ಕನ್ನಡ ಶಾಲೆಗಳ ಆಯಾ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಅಸ್ತಿತ್ವ ಮತ್ತು ಬಲಪಡಿಸುವಿಕೆ ಕುರಿತು ವಿಚಾರ ಸಂಕಿರಣ, ರಾಜ್ಯಮಟ್ಟದ ಯುವ ಸಾಹಿತ್ಯ ಸಮ್ಮೇಳನ ಸೇರಿದಂತೆ ಕವಿಸಂ ದೈನಂದಿನ ಕಾರ್ಯ ಚಟುವಟಿಕೆ, ಸಿಬ್ಬಂದಿ ವೇತನ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಾಗಿ ಮುಂಗಡ ಹಣ ನಿಗದಿಗೊಳಿಸಿ, ಆಯವ್ಯಯ ಮಂಡಿಸಲಾಗಿದೆ.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಪದಾಧಿಕಾರಿಗಳು ಇದ್ದರು. ಸಂಘ ಇನ್ನಷ್ಟು ಸಮಾಜಮುಖಿಯಾಗಿ ಕಾರ್ಯ ಮಾಡಲು ಸಂಘದ ಸದಸ್ಯರು ಸಭೆಯಲ್ಲಿ ಕೆಲವು ಸಲಹೆಗಳನ್ನು ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.