ರೋಟರಿ ಸಂಸ್ಥೆಯ ವಾರದ ಸಭೆಯಲ್ಲಿ ರತನ್ ಟಾಟಾ ಬಗ್ಗೆ ಶ್ರದ್ಧಾಂಜಲಿ
ಇತ್ತೀಚೆಗೆ ನಿಧನರಾದ ಖ್ಯಾತ ಉದ್ಯಮಿ ರಟನ್ ಟಾಟಾ ದೇಶದಲ್ಲಿ ಕೊರೋನಾ ಸಂದರ್ಭದಲ್ಲಿ ಸರ್ಕಾರಕ್ಕೆ ₹1500 ಕೋಟಿ ದಾನವಾಗಿ ನೀಡಿದ್ದರು ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಟಿ.ವಿ.ವಿಜಯನ್ ತಿಳಿಸಿದರು.
ಶನಿವಾರ ರಾತ್ರಿ ರೋಟರಿ ಹಾಲ್ ನಲ್ಲಿ ಇತ್ತೀಚಿಗೆ ನಿಧನರಾದ ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಜಲಿ ಹಾಗೂ ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಗತ್ಯ ಬಿದ್ದರೆ ದೇಶಕ್ಕಾಗಿ ತಮ್ಮ ಸಂಪತ್ತನ್ನು ದಾನ ಮಾಡುವುದಾಗಿ ರತನ್ ಟಾಟಾ ಘೋಷಣೆ ಮಾಡಿದ್ದರು. ರತನ್ ಟಾಟಾ ಅವರು ಪ್ರಪಂಚದ 150 ರಾಷ್ಟ್ರಗಳಲ್ಲಿ ತಮ್ಮ ಕಂಪನಿ ಬೆಳೆಸಿದ್ದರು. 14 ಲಕ್ಷ ಜನರಿಗೆ ಉದ್ಯೋಗ ನೀಡಿದ್ದರು ಎಂದರು.ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಎಸ್.ಶಾಂತಕುಮಾರ್ ಮಾತನಾಡಿ,ರತನ್ ಟಾಟಾ ಅವರಿಗೆ ಬಡವರ ಬಗ್ಗೆ ಖಾಳಜಿ ಇತ್ತು. ಮಧ್ಯಮ ವರ್ಗದವರಿಗೆ ₹1 ಲಕ್ಷ ವೆಚ್ಚದ ನ್ಯಾನೋ ಕಾರು ಬಿಡುಗಡೆ ಮಾಡಿದ್ದರು. ಉಪ್ಪಿನಿಂದ ಹಿಡಿದು ಕಬ್ಬಿಣದವರೆಗೆ ಟಾಟಾ ಕಂಪನಿ ತಯಾರಿಸಿದೆ. ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಬಹಳ ಪ್ರೀತಿ ಇತ್ತು. ಗೋವಾದಲ್ಲಿ ಸಿಕ್ಕಿದ ನಾಯಿ ತಂದು ಅದಕ್ಕೆ ಗೋವಾ ಎಂದು ಹೆಸರು ಇಟ್ಟಿದ್ದರು. ಮುಂಬೈನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಕಟ್ಟಡ ನಿರ್ಮಿಸಿ ಅಲ್ಲಿಂದ ಆಹಾರ ಹಾಕುವ ವ್ಯವಸ್ಥೆ ಮಾಡಿದ್ದರು. 20 ವರ್ಷದ ಹಿಂದೆ ₹33 ಸಾವಿರ ಕೋಟಿ ಆದಾಯ ಇದ್ದ ಟಾಟಾ ಕಂಪನಿ ಆದಾಯವನ್ನು ಈಗ ₹8 ಲಕ್ಷ 51 ಸಾವಿರ ಲಕ್ಷ ಕೋಟಿಗೆ ಹೆಚ್ಚಿಸಿದ್ದರು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪಡೆದ ನಿವೃತ್ತ ಶಿಕ್ಷಕ ಕೆ.ಎಸ್.ರಾಜಕುಮಾರ್ ಅವರನ್ನು ರೋಟರಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಕೆ.ಎಸ್.ರಾಜಕುಮಾರ್, ಮುಂದಿನ ದಿನಗಳಲ್ಲಿ 2 ಶಾಲೆಯನ್ನು ಆಯ್ಕೆ ಮಾಡಿ ಆ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರೋಟರಿ ಸಂಸ್ಥೆ ನನಗೆ ಸನ್ಮಾನ ಮಾಡಿರುವುದಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಸಭೆಯಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಮಧು ವೆಂಕಟೇಶ್, ರೋಟರಿ ಕ್ಲಬ್ ಸದಸ್ಯರಾದ ಪಿ.ಎಸ್. ವಿದ್ಯಾನಂದ ಕುಮಾರ್, ಕಿರಣ್, ಕಣಿವೆ ವಿನಯ,ಎಲ್.ಡಿ.ನವೀನ್, ಎಸ್.ಎಲ್.ಲೋಕೇಶ್, ಬಿ.ಟಿ.ವಿಜಯಕುಮಾರ್, ಮನೀಶ್, ಅಭಿಷೇಕ್, ಎಸ್.ಟಿ.ಗೌಡ, ಸುಂದರೇಶ್ ಮತ್ತಿತರರು ಇದ್ದರು.