ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ: ತುಂಬಿದ ಕೊಡ ತುಳುಕಿತಲೇ ಪರಾಕ್‌

KannadaprabhaNewsNetwork | Published : Feb 15, 2025 12:31 AM

ಸಾರಾಂಶ

ಕಾರ್ಣಿಕೋತ್ಸವ ಮುಗಿದ ಕೂಡಲೇ ಡೆಂಕಣ ಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹವು, ಕಾರ್ಣಿಕ ನುಡಿಯು ನಾನಾ ಗೂಡಾರ್ಥವನ್ನು ತಮ್ಮೊಳಗೆ ಚರ್ಚಿಸುವುದು ಎಲ್ಲೆಡೆ ಕಂಡು ಬಂತು.

ಹೂವಿನಹಡಗಲಿ: ತುಂಬಿದ ಕೊಡ ತುಳುಕಿತಲೇ ಪರಾಕ್‌...

ಇದು ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆಯ 124ನೇ ವರ್ಷದ ಕಾರ್ಣಿಕೋತ್ಸವದ ನುಡಿ.

ಹೌದು, ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಸ್ವಾಮಿಯ ಮೈಲಾರದ ಪುಣ್ಯಭೂಮಿ ಡೆಂಕಣ ಮರಡಿಯಲ್ಲಿ ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ತುಪ್ಪ ಸವರಿದ 20 ಅಡಿ ಉದ್ದದ ಐತಿಹಾಸಿಕ ಬಿಲ್ಲನ್ನೇರಿದ ಗೊರವಯ್ಯ ಕಾರ್ಣಿಕದ ರಾಮಣ್ಣ ದಶ ದಿಕ್ಕುಗಳತ್ತ ನೋಡುತ್ತಾ ಸದ್ದಲೇ... ಎಂದು ಕೂಗಿದ ಕೂಡಲೇ ಡೆಂಕಣ ಮರಡಿಯಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತ ಗಣ ಸೇರಿದಂತೆ ಪಶು, ಪಕ್ಷಿಗಳು ಕ್ಷಣ ಹೊತ್ತು ಮೌನ ವಹಿಸಿದ್ದವು. ಆಗ ಗೊರವಯ್ಯ ತುಂಬಿದ ಕೊಡ ತುಳುಕಿತಲೇ ಪರಾಕ್‌ ಎಂದು ನಾಡಿನ ಭವಿಷ್ಯ ನುಡಿದರು.

ಜಾತ್ರೆಯಲ್ಲಿ ಸುಮಾರು 6ರಿಂದ 7 ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಕಾರ್ಣಿಕೋತ್ಸವ ಮುಗಿದ ಕೂಡಲೇ ಡೆಂಕಣ ಮರಡಿಯಲ್ಲಿ ನೆರೆದಿದ್ದ ಭಕ್ತ ಸಮೂಹವು, ಕಾರ್ಣಿಕ ನುಡಿಯು ನಾನಾ ಗೂಡಾರ್ಥವನ್ನು ತಮ್ಮೊಳಗೆ ಚರ್ಚಿಸುವುದು ಎಲ್ಲೆಡೆ ಕಂಡು ಬಂತು. ಈ ಭವಿಷ್ಯ ನುಡಿಯು ಕೃಷಿ, ರಾಜಕೀಯ, ಆರ್ಥಿಕ, ವಾಣಿಜ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಅನ್ವಯವಾಗುತ್ತಿದೆ ಎಂಬುದು ಭಕ್ತರ ನಂಬಿಕೆ.

ಕಾರ್ಣಿಕದ ವಿಶ್ಲೇಷಣೆ ಮಾಡುತ್ತಾ, ಕೃಷಿ ಕ್ಷೇತ್ರಕ್ಕೆ ಅಷ್ಟೇನೂ ಲಾಭದಾಯಕವಾಗಿಲ್ಲ. ಜತೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ವಾಣಿಜ್ಯ ಕ್ಷೇತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವಿದೆ ಎಂದು ಕಾರ್ಣಿಕದ ನುಡಿಯ ವಿಶ್ಲೇಷಣೆ ಕುರಿತು ರೈತರು ಚರ್ಚಿಸುತ್ತಿದ್ದರು.

ಕಳೆದ ವರ್ಷ ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌ ಎಂಬ ಕಾರ್ಣಿಕ ನುಡಿ ಹೇಳಿದಾಗ, ಎಲ್ಲ ಕಡೆಗೂ ಅತಿಯಾದ ಮಳೆಯಾಗಿ ಬೆಳೆ ನಷ್ಟ ಉಂಟಾಗಿತ್ತು.

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯು 19ನೇ ಶತಮಾನಗಳಿಂದ ಮಲ್ಲಾಸುರ ಮಣಿಕಾಸುರರನ್ನು ಸಂಹರಿಸಿದ ವಿಜಯೋತ್ಸವದ ಸವಿನನಪಿಗಾಗಿ ಕಾರ್ಣಿಕ ನುಡಿ ಹೇಳುವ ಪರಂಪರೆ ನಡೆದು ಬಂದಿದೆ.

ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದಿಂದ ಅಶ್ವಾರೂಢರಾಗಿ ಕಾರ್ಣಿಕ ಗೊರವಯ್ಯನನ್ನು ಕರೆತಂದು ಕಾರ್ಣಿಕ ನುಡಿಯಲು ಆದೇಶಿಸಿದರು. ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿದ್ದ ಗೊರವಯ್ಯ ಕಾರ್ಣಿಕದ ರಾಮಣ್ಣ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದರು.. ಆಗ ನೆರೆದಿದ್ದ ಸಾವಿರಾರು ಭಕ್ತರು ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ, ಛಾಂಗ್ ಮಲೋ... ಛಾಂಗ್ ಮಲೋ..ಎಂದು ದೇವರ ನಾಮಸ್ಮರಣೆ ಮುಗಿಲು ಮುಟ್ಟಿತ್ತು.

ಗೊರವರು ಢಮರುಗ ಬಾರಿಸುತ್ತಾ ಮೆರವಣಿಗೆ ಮೂಲಕ ಕರೆ ತಂದರು. ಜತೆಗೆ ಕಂಚಿವೀರರು ಕೂಡ ತಮ್ಮ ಆಯುಧಗಳನ್ನು ಹಿಡಿದುಕೊಂಡು ಡೆಂಕಣ ಮರಡಿಗೆ ಬಂದರು. ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಶಾಸಕ ಕೃಷ್ಣನಾಯ್ಕ, ಸಂಸದ ಈ.ತುಕಾರಾಂ, ಆನಂದ್‌ ಗಡ್ಡದೇವರಮಠ, ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ, ಐಜಿಪಿ ಲೋಕೇಶಕುಮಾರ್‌, ಎಸ್ಪಿ ಶ್ರೀಹರಿಬಾಬು, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ಜಿ.ಸಂತೋಷಕುಮಾರ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಸವಿತಾ, ತಾಪಂ ಇಒ ಎಂ.ಉಮೇಶ, ಡಿವೈಎಸ್ಪಿ ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.

ಡೆಂಕಣ ಮರಡಿಯಲ್ಲಿ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವಂತೆ, ಈ ಬಾರಿಯೂ ಜಿಲ್ಲಾಡಳಿತ ಗುಣಮಟ್ಟದ ಧ್ವನಿವರ್ಧಕಗಳನ್ನು ಬಳಕೆ ಮಾಡಲಾಗಿತ್ತು. ವಿವಿಧ ತಂತ್ರಜ್ಞಾನ ಬಳಕೆಯಿಂದ ಕಾರ್ಣಿಕ ನುಡಿ ಭಕ್ತರಲ್ಲಿ ಗೊಂದಲ ಮೂಡದೇ ಸಷ್ಟವಾಗಿ ಆಲಿಸಲು ಸಾಧ್ಯವಾಯಿತು.

Share this article