ಅರ್ಚಕನ ಬ್ಲ್ಯಾಕ್‌ಮೇಲ್‌ ಮಾಡಿದ ಮಂಗಳೂರಿನ ವ್ಯಕ್ತಿಯ ಬಂಧಿಸಿದ ಕಾಸರಗೋಡು ಪೊಲೀಸರು

KannadaprabhaNewsNetwork |  
Published : Feb 08, 2025, 12:31 AM IST
ಕ್ರೈಂ | Kannada Prabha

ಸಾರಾಂಶ

ಕಾಸರಗೋಡಿನ ಅರ್ಚಕರೊಬ್ಬರನ್ನು ಫೇಸ್‌ಬುಕ್‌ ಮೂಲಕ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಫೋಟೋ, ವಿಡಿಯೋ ಶೇರ್ ಮಾಡಿ ಅದನ್ನೇ ಮುಂದಿಟ್ಟು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಲ್ಲಿ ಮಂಗಳೂರಿನ ಯುವಕನೊಬ್ಬನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಸರಗೋಡಿನ ಅರ್ಚಕರೊಬ್ಬರನ್ನು ಫೇಸ್‌ಬುಕ್‌ ಮೂಲಕ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಫೋಟೋ, ವಿಡಿಯೋ ಶೇರ್ ಮಾಡಿ ಅದನ್ನೇ ಮುಂದಿಟ್ಟು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಲ್ಲಿ ಮಂಗಳೂರಿನ ಯುವಕನೊಬ್ಬನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ಕೊಳಂಬೆ ನಿವಾಸಿ ಅಶ್ವಥ್‌ ಆಚಾರ್ಯ (33) ಬಂಧಿತ ವ್ಯಕ್ತಿ.

ಫೇಸ್‌ಬುಕ್‌ನಲ್ಲಿ ಅರ್ಚಕರ ಜೊತೆಗೆ ತಾನು ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡು ಫ್ರೆಂಡ್ ಆಗಿದ್ದ ಅಶ್ವಥ್, ಆನಂತರ ಆನ್‌ಲೈನ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದ. ಈ ವೇಳೆ ಲೈಂಗಿಕವಾಗಿ ಆಕರ್ಷಿಸಿ ಸೆಕ್ಸ್ ಸಂಬಂಧಿತ ಚಾಟ್ ಮಾಡಿಕೊಂಡಿದ್ದರು. ಇದೇ ವೇಳೆ ಒಬ್ಬರಿಗೊಬ್ಬರು ಫೋಟೋ, ವಿಡಿಯೋ ಶೇರ್ ಮಾಡಿಕೊಂಡಿದ್ದು, ಇದನ್ನೇ ಮುಂದಿಟ್ಟು ಅರ್ಚಕನನ್ನು ಅಶ್ವಥ್ ಆಚಾರ್ಯ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ ತಾನು ಯುವತಿಯಾಗಿ ಲಿಂಗ ಬದಲಾಯಿಸಿಕೊಳ್ಳುತ್ತೇನೆ, ಅದಕ್ಕಾಗಿ ಹಣದ ಅಗತ್ಯವಿದೆ ಎಂದೂ ನಂಬಿಸಿದ್ದಾನೆ.

ಬ್ಲ್ಯಾಕ್‌ಮೇಲ್‌ಗೆ ಒಳಗಾದ ಅರ್ಚಕ ಕಳೆದ ನವೆಂಬರ್ ತಿಂಗಳಿನಿಂದ ನಾಲ್ಕು ತಿಂಗಳಲ್ಲಿ 10.5 ಲಕ್ಷ ರು. ಮೊತ್ತವನ್ನು ಮೊಬೈಲ್ ಆ್ಯಪ್‌ ಮತ್ತು ಬ್ಯಾಂಕ್ ಮೂಲಕ ಆರೋಪಿ ಖಾತೆಗೆ ಪಾವತಿಸಿದ್ದರು. ಪೌರೋಹಿತ್ಯ ನಡೆಸುತ್ತಾ ದುಡಿಮೆ ಮಾಡುತ್ತಿದ್ದ ಅರ್ಚಕನಲ್ಲಿ ಮತ್ತಷ್ಟು ಹಣ ನೀಡದಿದ್ದರೆ ವಿಡಿಯೋ, ಫೋಟೊ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಬೇಸತ್ತ ಅರ್ಚಕರು ಫೆ.5ರಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಮಂಗಳೂರಿನ ಮನೆಯಿಂದಲೇ ಮಧ್ಯರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ.

ಅರ್ಚಕ 3 ಲಕ್ಷ ರು.ವನ್ನು ಗೂಗಲ್‌ ಪೇನಲ್ಲಿ ಪಾವತಿಸಿದ್ದಲ್ಲದೆ, 7.5 ಲಕ್ಷ ರು. ಮೊತ್ತವನ್ನು ಮೂರು ಬಾರಿ ಬ್ಯಾಂಕ್‌ ಖಾತೆ ಮೂಲಕ ಪಾವತಿಸಿದ್ದಾರೆ. ಆರೋಪಿ ಈ ರೀತಿ ಬೇರೆ ವ್ಯಕ್ತಿಗಳನ್ನೂ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ