ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ಸರ್ಕಾರದ ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಸಂಕೇಶ್ವರದ ಎಸ್ಡಿವಿಎಸ್ ಸಂಘದ ಎಸ್.ಎಸ್ ಕಲಾ ಹಾಗೂ ಟಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಕನ್ನಡ ವಿಭಾಗಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಜರತಾರಿ ಜಗದ್ಗುರು ಸಾಮಾಜಿಕ ಧಾರ್ಮಿಕ ವ್ಯವಸ್ಥೆಯ ಸೂಕ್ಷ್ಮತೆಗಳು ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜರತಾರಿ ಜಗದ್ಗುರು ಒಂದು ಚಾರಿತ್ರಿಕ ಸಂಗತಿಯನ್ನಾಧರಿಸಿ ಬರೆದ ಕಾದಂಬರಿ. ಇದನ್ನು ರಚಿಸುವುದರ ಮೂಲಕ ಸಮಾಜ ಪೀಡಕ ಪ್ರಭಾವಿ ಧಾರ್ಮಿಕ ಮುಖ್ಯಸ್ಥನನ್ನು ಎದುರು ಹಾಕಿಕೊಂಡ ಪರಿಣಾಮವಾಗಿ ಕಟ್ಟೀಮನಿಯವರು ತಮ್ಮ ಜೀವಕ್ಕೂ ಅಪಾಯ ತಂದುಕೊಂಡರು. ಆದರೂ ಅವರು ವೈಯಕ್ತಿಕ ಬಾಳಿನಲ್ಲಿ ಎಂದಿಗೂ ರಾಜಿಯಾಗದೆ ಬರೆದಂತೆ ಬದುಕಿದರು ಎಂದು ಹೇಳಿದರು.ವಿಶೇಷ ಉಪನ್ಯಾಸ ನೀಡಿದ ವಿಮರ್ಶಕ ಪ್ರಕಾಶ ಗಿರಿಮಲ್ಲನವರ, ಬಸವರಾಜ ಕಟ್ಟೀಮನಿಯವರ ಸಮಾಜಮುಖಿ ಕಾದಂಬರಿಗಳಲ್ಲಿ ಜರತಾರಿ ಜಗದ್ಗುರು ಕೃತಿ ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸಮಾಜದಲ್ಲಿ ನಡೆಯುವ ಅನೈತಿಕ ವ್ಯವಸ್ಥೆಯನ್ನು ಜನರೆದುರಿಗೆ ತೆರೆದಿಡುವ ಪ್ರಗತಿಶೀಲ ಲೇಖಕರಾದ ಬಸವರಾಜ ಕಟ್ಟೀಮನಿಯವರು ಧಾರ್ಮಿಕ ನಂಬಿಕೆಯಲ್ಲಿ ಜಗದ್ಗುರು ಸ್ಥಾನದಲ್ಲಿರುವ ಒಬ್ಬ ಮುಖ್ಯ ವ್ಯಕ್ತಿ ತನ್ನ ಒಂದು ಇಂದ್ರಿಯ ದೌರ್ಬಲ್ಯದಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ಕದಡಬಲ್ಲ ಎಂಬ ಆಶಯವನ್ನು ಚಾರಿತ್ರಿಕ ಘಟನೆಯನ್ನಾದರಿಸಿ ಬರೆದು ಪ್ರಗತಿಶೀಲತೆಗೆ ಮಾದರಿಯಾದರು ಎಂದು ವಿವರಿಸಿದರು.
ಪ್ರತಿಷ್ಠಾನದ ಸದಸ್ಯ ಸಂಚಾಲಕ ಹಮೀದಾ ಬೇಗಂ ದೇಸಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮೀ ಗಡಕರಿ ಕ್ರಾಂತಿ ಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯಮಾಲಾ ನಾಗನೂರಿ ಸ್ವಾಗತಿಸಿದರು. ಪ್ರಾಧ್ಯಾಪಕ ದೇಮಣ್ಣ ಸೊಗಲದ ವಂದಿಸಿದರು. ಕುಮಾರಿ ವಚನಶ್ರೀ ಚೌಗಲಾ ನಿರ್ವಹಿಸಿದರು.