ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಮದ್ಯಪಾನ, ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡದಂತೆ ತಮ್ಮ ಬದುಕಿನುದ್ದಕ್ಕೂ ಹೋರಾಡಿದ, ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಲಕ್ಷಣಸಾ ಕಾವಡೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮುರುಡಿ ಗ್ರಾಮದ ಸಾಮಾಜಿಕ ಹೋರಾಟಗಾರ ಯಮನಪ್ಪ ದಳಪತಿ ಹೇಳಿದರು. ಪಟ್ಟಣದ ಗುಳೇದಗುಡ್ಡದ ಬಾಲಕರ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ಬುಧವಾರ ಕಲ್ಪವೃಕ್ಷ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ, ಭೀಮವಾಹಿನಿ ಮತ್ತು ಅಭಯಾಮೃತ ಸಂಸ್ಥೆ ಇವುಗಳ ಸಹಯೋಗದಲ್ಲಿ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಲ.ದ.ಕಾವಡೆಯವರ 15ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದರು.
ಲ.ದ.ಕಾವಡೆ ಅವರ ಶಿಷ್ಯ ಅಶೋಕ ಹೆಗಡೆ ಮಾತನಾಡಿ, ಕಾವಡೆ ಅಜ್ಜನವರ ಒಡನಾಟದಲ್ಲಿ ಬೆಳೆದ ನನಗೆ ಅವರ ಆದರ್ಶಗಳು ಬದುಕನ್ನು ಸನ್ಮಾರ್ಗದತ್ತ ಕರೆತಂದವು. ಅವರ ಸಾಮಾಜಿಕ ಕಳಕಳಿ ಅನುಕರಣೀಯ ಎಂದರು. ವಿಶ್ರಾಂತ ಪ್ರಾಚಾರ್ಯ ಡಾ.ಸಿ.ಎಂ.ಜೋಶಿ, ಉಪಪ್ರಾಚಾರ್ಯ ಎನ್.ಸಿ.ಮುದಕವಿ, ಬಡಿಗೇರ ವಕೀಲರು ಲ.ದ.ಕಾವಡೆ ಅವರ ಕುರಿತಾಗಿ ಮಾತನಾಡಿದರು. ಹಿರಿಯಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಎಸ್ಸೆಸ್ಸೆಲ್ಸಿ ಬಡ ವಿದ್ಯಾರ್ಥಿಗಳಗೆ ಸಾಂಕೇತಿಕವಾಗಿ ನೋಟ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚಣೆ ಮಾಡಲಾಯಿತು. ಶ್ರೀಕಾಂತ ಹುನಗುಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.