ಕನ್ನಡಪ್ರಭ ವಾರ್ತೆ ಕವಿತಾಳ
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಇತ್ತೀಚೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೆ ಏರಿದೆ, ಹೀಗಾಗಿ ಜವಾಬ್ದಾರಿ ಹೆಚ್ಚಿದ್ದು. ಈ ಸಂದರ್ಭದಲ್ಲಿಯೇ ಪ್ರಾಚಾರ್ಯರು ಉಪನ್ಯಾಸಕರು ಮತ್ತು ಎಫ್ಡಿಸಿ ವರ್ಗವಾಣೆಯಿಂದ ಮಕ್ಕಳು, ಪಾಲಕರು ತೊಂದರೆ ಅನುಭವಿಸುವಂತಾಗಿದೆ.
ಪ್ರಾಚಾರ್ಯಯರು, ಒಬ್ಬ ಪ್ರಥಮ ದರ್ಜೆ ಸಹಾಯಕ ಸೇರಿದಂತೆ ಏಳು ಜನ ಉಪನ್ಯಾಸಕರ ಹುದ್ದೆಗಳ ಮಂಜೂರಾತಿ ಇದೆ. ಕಾಯಂ ಪ್ರಾಚಾರ್ಯ ಹುದ್ದೆ ದಶಕಗಳಿಂದ ಖಾಲಿಯಿದ್ದು ಈಗ ಪ್ರಭಾರ ಪ್ರಚಾರ್ಯರು ಸೇರಿದಂತೆ ಮೂವರು ಉಪನ್ಯಾಸಕರು, ಪ್ರಥಮ ದರ್ಜೆ ಸಹಾಯಕ ವರ್ಗವಾಣೆಯಾಗಿದ್ದಾರೆ. ಇಬ್ಬರು ಕಾಯಂ ಉಪನ್ಯಾಸಕರು ಇಲ್ಲಿಗೆ ವರ್ಗವಾಗಿ ಬಂದಿದ್ದಾರೆ, ಮೂವರು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಕಚೇರಿ ಕೆಲಸವನ್ನೂ ಉಪನ್ಯಾಸಕರು ನಿಭಾಯಿಸುವಂತಾಗಿದೆ.ಇಲ್ಲಿ ಒಟ್ಟು 228 ಮಕ್ಕಳು ಕಲಿಯುತ್ತಿದ್ದು, ಪಿಯುಸಿ ಪ್ರಥಮ ವರ್ಷದ ಕಲಾ ವಿಭಾಗದಲ್ಲಿ 35 ಬಾಲಕರು ಮತ್ತು 65 ಬಾಲಕಿಯರು ಮತ್ತು ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ 5 ಬಾಲಕರು ಮತ್ತು 23 ಬಾಲಕಿಯರು ಮತ್ತು ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ 27 ಬಾಲಕರು ಮತ್ತು 49 ಬಾಲಕಿಯರು ಮತ್ತು ಪಿಯುಸಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ 7 ಬಾಲಕರು ಮತ್ತು 17 ಬಾಲಕಿಯರು ಅಭ್ಯಾಸ ಮಾಡುತ್ತಿದ್ದಾರೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಮಕ್ಕಳ ಕಲಿಕೆಗೆ ಯಾವುದೇ ತೊಂದರೆ ಇಲ್ಲ ಆದರೆ ಎಫ್ಡಿಸಿ ನೇಮಕ ಮಾಡಬೇಕಿದೆ ಎಂದು ಪ್ರಭಾರಿ ಪ್ರಾಚಾರ್ಯರಾದ ಮಹಾಂತಮ್ಮ ತಿಳಿಸಿದ್ದಾರೆ.
ಡಿಡಿಪಿಯುರಿಂದ ಬೇಜವಾಬ್ದಾರಿ ಪ್ರತಿಕ್ರಿಯೆಇದೇನು ದೊಡ್ಡ ಸಮಸ್ಯೆಯಲ್ಲ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ನೀವು ಅಲ್ಲಿನ ಉಪನ್ಯಾಸಕರನ್ನು ಕೇಳಬೇಕು ಇಲ್ಲವೇ ಸರ್ಕಾರವನ್ನು ಪ್ರಶ್ನಿಸಬೇಕು, ನಮಗೆ ಕೇಳಿದರೆ ಹೇಗೆ ಸರ್ಕಾರ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಾಗ ಇಲ್ಲಿಗೆ ಹೊಸಬರು ಬರುತ್ತಾರೆ. ಅಲ್ಲಿಯ ವರೆಗೆ ಯಾರೂ ವರ್ಗವಾಗಿ ಬರುವುದಿಲ್ಲ. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾಮಯ್ಯ ತಮ್ಮ ಜವಾಬ್ದಾರಿಯಲ್ಲ ಎನ್ನುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.