ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನಲ್ಲಿ ಇರುವ ಬಡಾವಣೆಗಳು ಯಾವುದೂ ಕೆಡಿಎ ಮಾರ್ಗಸೂಚಿಯಂತೆ ಮನೆಗಳನ್ನು ನಿರ್ಮಾಣ ಮಾಡಿಲ್ಲ,ಈಗ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡುವವರು ಮಾತ್ರ ಕೆಡಿಎ ಮಾರ್ಗಸೂಚಿಯಂತೆ ಮಾಡಲಾಗುತ್ತಿದಾರೆ, ಆದರೆ ಹಳೇ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಈಗ ಹೊಸ ಮನೆ ಕಟ್ಟಲು ಹೋದರೆ ಅವರಿಗೆ ವಿದ್ಯುತ್ ಸಂಪರ್ಕಸಿಗದೆ ಪರದಾಡುವಂತಾಗಿದೆ. ಕಳೆದ ಎರಡು ತಿಂಗಳಿಂದ ಈಚೆಗೆ ಹೊಸ ಮನೆಗಳನ್ನು ನಿರ್ಮಾಣ ಮಾಡಿರುವವರು ಮನೆ ಗೃಹ ಪ್ರವೇಶ ಮಾಡಿದ್ದಾರೆ, ಆದರೆ ಪರ್ಮನೆಂಟ್ ಸಂಪರ್ಕಸಿಗದೆ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಇದು ದುಬಾರಿಯಾಗಿದ್ದು, ನಿತ್ಯ ಬೆಸ್ಕಾಂ ಕಚೇರಿ ಸುತ್ತ ಅಲೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಹಳೇ ಬಡಾವಣೆಗಳು ಕೆಡಿಎ ಪ್ರಕಾರ ರಚನೆಯಾಗಿಲ್ಲ, ಯಾವುದೇ ಪ್ಲ್ಯಾನ್ ಇಲ್ಲ, ರಸ್ತೆಗಳು ಸಣ್ಣದಾಗಿವೆ, ಚರಂಡಿ ವ್ಯವಸ್ಥೆ ಮೊದಲೇ ಇಲ್ಲ ಹೀಗಿರುವಾಗ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರ ಕಡ್ಡಾಯಗೊಳಿಸಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ವಿದ್ಯುತ್ ಸಹವಾಸವೇ ಬೇಡವೆಂದು ಸೋಲಾರ್ ಅಳವಡಿಕೆಗೆ ಮುಂದಾದರೂ ಅದಕ್ಕೂ ಸರ್ಕಾರದ ಅನುಮತಿ ಅಗತ್ಯ.ಸಣ್ಣ ಮನೆಗೆ ಅನ್ವಯ ಇಲ್ಲ?
ನಗರ ಹಾಗೂ ಗ್ರಾಮೀಣ ಬಾಗದಲ್ಲಿ ಬಹುತೇಕ ಆಸ್ತಿಗಳು ಕಂದಾಯ ಹಾಗೂ ಬಿ ಖಾತಾ ನಿವೇಶನಗಳು,ಅವುಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ನೀಡುವಂತಿಲ್ಲ, ನಕ್ಷೆ ಮಂಜೂರಾತಿ ಇಲ್ಲದ ಕಟ್ಟಗಳಿಗೆ ಓಸಿ ಹಾಗೂ ಸಿಸಿ ನೀಡಲು ಅವಕಾಶವಿಲ್ಲ, ಓಸಿ ಹಾಗೂ ಸಿಸಿ ಇಲ್ಲದಿದ್ದರೆ ವಿದ್ಯುತ್ ನೀಡಲ್ಲ, ಇದರಿಂದ ಸಾಲ ಮಾಡಿ ಲಕ್ಷಾಂತರ ರೂ ಖರ್ಚು ಮಾಡಿ ಮನೆಗಳನ್ನು ಕಟ್ಟಿಕೊಂಡಿರುವ ಬಡವರು, ಮಧ್ಯಮವರ್ಗದವರು ಅತಂತ್ರರಾಗಿದ್ದಾರೆ. ಸಣ್ಣ ಮನೆಗಳ ನಿರ್ಮಾಣ ಮಾಡುವವರಿಗೆ ಓಸಿ, ಸಿಸಿ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರೂ ಅದಕ್ಕೂ ಸರ್ಕಾರದ ಮಾರ್ಗಸೂಚಿ ಬಂದಿಲ್ಲ ಎನ್ನಲಾಗಿದೆ.