ಕೋಟ: ಹೆಚ್ಚು ಮೊಬೈಲ್ ಬಳಕೆ ಮಕ್ಕಳ ಮನೋಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಬಗ್ಗೆ ಪೋಷಕರು ಜಾಗೃತರಾಗಿ, ಮಕ್ಕಳನ್ನು ಮೊಬೈಲಿನಿಂದ ದೂರ ಮಾಡಿ, ಅವರನ್ನು ಸುಸಂಸ್ಕೃತರನ್ನಾಗಿಸಬೇಕು ಎಂದು ಸಾಮಾಜಿಕ ಚಿಂತಕ ಋಷಿರಾಜ್ ಸಾಸ್ತಾನ ಅಭಿಪ್ರಾಯಪಟ್ಟರು. ಇಲ್ಲಿನ ಪಾಂಡೇಶ್ವರ ಪಂಚಾಯಿತಿ ಸಭಾಂಗಣದಲ್ಲಿ ಪಾಂಡೇಶ್ವರ ಗ್ರಾಮಪಂಚಾಯಿತಿ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತುಮಾಹಿತಿ ಕೇಂದ್ರ ಪಾಂಡೇಶ್ವರ ಇವರ ಆಶ್ರಯದಲ್ಲಿ ಮೇ 4ರಿಂದ 11ರ ತನಕ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಭಾಗಿಯಾಗಿ ಮಕ್ಕಳ ಕೌಶಲ್ಯ ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳನ್ನು ತಿಳಿಸಿದರು. ಈ ವೇಳೆ ಎಂಟು ದಿನಗಳ ಕಾಲ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾದ ಕಸಾಪ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ಶಿಕ್ಷಕಿ ನಾಗರತ್ನ ಹೇರ್ಳೆ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಕೋಟತಟ್ಟು ಇವರುಗಳನ್ನು ಗೌರವಿಸಲಾಯಿತು. ಶಿಬಿರದಲ್ಲಿ ನಾಲ್ಕು ತಂಡಗಳ ಏರ್ಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ಎರಡು ತಂಡಗಳಿಗೆ ಬಹುಮಾನವನ್ನು ನೀಡಲಾಯಿತು.