ತಿಪಟೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ತಿಪಟೂರಿನ ಕೊನೇಹಳ್ಳಿ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರ ಮತ್ತು ಕಲ್ಪತರು ವಿದ್ಯಾ ಸಂಸ್ಧೆ ಮತ್ತು ಕೃಷಿ, ಜಿಲ್ಲೆಯ ಕೃಷಿಯೇತರ ಇಲಾಖೆಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಎರಡು ದಿನದ ವಿಸ್ಮಯ ಕೀಟ ಪ್ರಪಂಚ ವಿಶೇಷ ಕೀಟ ಪ್ರದರ್ಶನ ಹಾಗೂ ವಿಚಾರ ಸಂಕಿರಣವನ್ನು ೩೦-೩೧ ರಂದು ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ (ಕೆಐಟಿ) ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕೃಷಿ, ಪರಿಸರ ಹಾಗೂ ಮಾನವ ಜೀವನದಲ್ಲಿ ಕೀಟಗಳ ಮಹತ್ವವನ್ನು ರೈತರು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ಪರಿಚಯಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೀಟಗಳನ್ನು ಕೇವಲ ಬೆಳೆಗಳಿಗೆ ಹಾನಿ ಉಂಟುಮಾಡುವ ಜೀವಿಗಳೆಂದು ಪರಿಗಣಿಸದೇ, ಪರಿಸರ ಸಮತೋಲನ, ಆಹಾರ ಭದ್ರತೆ, ಪರಾಗಸ್ಪರ್ಶ, ಜೈವಿಕ ನಿಯಂತ್ರಣ ಹಾಗೂ ಮಾನವ ಕಲ್ಯಾಣದಲ್ಲಿ ಅವುಗಳ ಬಹುಮುಖ ಪಾತ್ರವನ್ನು ಪರಿಚಯಿಸಲಾಗುತ್ತದೆ.ಕೃಷಿಯಲ್ಲಿ ಕೀಟಗಳ ಮಹತ್ವ ಹಾಗೂ ಅವುಗಳ ವೈವಿಧ್ಯತೆ. ಕೀಟಗಳ ಜೀವನ ಚಕ್ರ ಹಾಗೂ ರೂಪಾಂತರ ಹಂತಗಳ ನೇರ ಪ್ರದರ್ಶನ. ಬೆಳೆಗಳಿಗೆ ಹಾನಿ ಉಂಟುಮಾಡುವ ಪ್ರಮುಖ ಕೀಟಗಳು ಹಾಗೂ ಅವುಗಳ ಸಮಗ್ರ ನಿರ್ವಹಣೆ. ಉಪಯುಕ್ತ ಕೀಟಗಳ ಪರಿಚಯ ಮತ್ತು ಅವುಗಳ ಪಾತ್ರ. ಪರಿಸರ ಸಂರಕ್ಷಣೆ ಹಾಗೂ ಜೈವಿಕ ನಿಯಂತ್ರಣದಲ್ಲಿ ಕೀಟಗಳ ಮಹತ್ವ. ಅಲಂಕಾರಿಕ ಹಾಗೂ ಅಪರೂಪದ ಕೀಟಗಳ ವಿಶೇಷ ಸಂಗ್ರಹ. ಫೋರೆನ್ಸಿಕ್ ಕೀಟಶಾಸ್ತ್ರ ದ ಕುರಿತು ವಿಶೇಷ ಮಾಹಿತಿ. ಸಂರಕ್ಷಿತ ಹಾಗೂ ವೈವಿಧ್ಯಮಯ ಕೀಟಗಳ ಅಪೂರ್ವ ಪ್ರದರ್ಶನ ಇದಾಗಿದೆ. ಆದ್ದರಿಂದ ಜಿಲ್ಲೆಯ ರೈತರು ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ವಿಶೇಷ ಪ್ರದರ್ಶನದ ಪ್ರಯೋಜನ ಪಡೆಯುವಂತೆ ಕೆವಿಕೆ ಮುಖ್ಯಸ್ಧರಾದ ಡಾ. ಶಂಕರ ಎಂ. ಹೆಚ್. ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.