ಶಿರಾ: ತಾಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಳೆದ ೧೦ ತಿಂಗಳಿಂದಲೂ ಅಂಗನವಾಡಿ ಕಾರ್ಯಕರ್ತೆ ನಿಯೋಜನೆಯಾಗದೆ ಮಕ್ಕಳಿಗೆ ಸರಿಯಾದ ಪಾಠ ಪ್ರವಚನ ಹಾಗೂ ಪೋಷಣೆ ಸಿಗುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಭಟನೆ ನಡೆಸಿದ ಕೆಲವು ಮಕ್ಕಳ ಪೋಷಕರು, ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸುಮಾರು ೩೯ ಮಕ್ಕಳಿದ್ದು, ಅಂಗನವಾಡಿ ಸಹಾಯಕಿ ಮಾತ್ರ ಇದ್ದಾರೆ. ಅವರೇ ಮಕ್ಕಳಿಗೆ ಆಹಾರ ನೀಡುವುದು, ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಒಬ್ಬರೇ ಇರುವುದರಿಂದ ಮಕ್ಕಳಿಗೆ ಸರಿಯಾದ ಕಲಿಕಾಭ್ಯಾಸ ಮಾಡಿಸಲು ಆಗುತ್ತಿಲ್ಲ. ಅಂಗನವಾಡಿ ಮಕ್ಕಳನ್ನು ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ೧೦ ತಿಂಗಳ ಹಿಂದೆ ಇದ್ದ ಅಂಗನವಾಡಿ ಕಾರ್ಯಕರ್ತೆಯೂ ಅಮಾನತ್ತಾಗಿದ್ದು, ಅವರ ಸ್ಥಳಕ್ಕೆ ಇದುವರೆಗೂ ಬೇರೆಯವರನ್ನು ನಿಯೋಜನೆ ಮಾಡುತ್ತಿಲ್ಲ. ಇದರಿಂದ ಮಕ್ಕಳಿಗೂ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಾವರೆಕೆರೆ ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀದೇವಿ, ಗಿರಿಜಮ್ಮ, ಶಾರದಮ್ಮ, ಶೃತಿ, ಜ್ಯೋತಿ, ರಂಗಲಕ್ಷ್ಮಿ, ಅನ್ನಪೂರ್ಣ, ಪ್ರೇಮ ಸೇರಿದಂತೆ ಹಲವರು ಹಾಜರಿದ್ದರು.