- ಬಿಐಇಟಿ ಕಾಲೇಜಿನಲ್ಲಿ ‘ಸಂಕಲ್ಪ-2’ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಯೊಬ್ಬರೊಳಗೂ ಒಂದು ದೀಪವಿದೆ. ಆ ದೀಪವೇ ನಮ್ಮ ಗುರಿ. ವಿದ್ಯಾರ್ಥಿಗಳು ಎದುರಾಗುವ ಅಡೆತಡೆ, ಒತ್ತಡ ಮತ್ತು ಆಕರ್ಷಣೆಗಳಿಂದ ಅದು ಆರದಂತೆ ಕಾಪಾಡಿಕೊಂಡು, ಶಿಸ್ತು ಹಾಗೂ ನಿರಂತರ ಪರಿಶ್ರಮದೊಂದಿಗೆ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಐಎಎಸ್ ಬಾಬಾ, ಬೆಂಗಳೂರು ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಸಂಕಲ್ಪ-2’ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗಬೇಕು. ಸ್ವಯಂ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಪ್ರತಿದಿನ ನಿಗದಿತ ವೇಳಾಪಟ್ಟಿ ರೂಪಿಸಿಕೊಂಡು ಅದರಂತೆ ಅಧ್ಯಯನ ನಡೆಸಬೇಕು. ಸೂಕ್ತ ಪುಸ್ತಕಗಳು, ದಿನಪತ್ರಿಕೆ ಹಾಗೂ ಪ್ರಚಲಿತ ವಿದ್ಯಮಾನಗಳನ್ನು ಓದಬೇಕು. ಸಂದೇಹಗಳನ್ನು ಶಿಕ್ಷಕರು ಮತ್ತು ಮಾರ್ಗದರ್ಶಕರೊಂದಿಗೆ ಚರ್ಚಿಸಬೇಕು. ಇತರರು ಎಲ್ಲಿ ಯಶಸ್ವಿಯಾದರು, ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ವಿಶ್ಲೇಷಿಸಿಕೊಂಡರೆ ನಮ್ಮನ್ನು ನಾವು ಪ್ರತಿದಿನ ಉತ್ತಮಪಡಿಸಿಕೊಳ್ಳಲು ಸಾಧ್ಯ ಎಂದರು.
ತರಬೇತಿ ಕೇಂದ್ರದಲ್ಲಿ ಗ್ರಂಥಾಲಯ, ಅಗತ್ಯ ಪುಸ್ತಕಗಳು, ಬೋಧಕರು ಹಾಗೂ ಮಾರ್ಗದರ್ಶಕರ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆಯಲ್ಲಿರುವ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನೂ ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸಿ ಮಾರ್ಗದರ್ಶನ ನೀಡುವಂತೆ ಕೋರಲಾಗಿದೆ. ಪೋಷಕರು ಕೂಡ ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ಅವರು ತರಗತಿಗಳಿಗೆ ನಿಯಮಿತವಾಗಿ ಹಾಜರಾಗುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಸಮಸ್ಯೆ ಮತ್ತು ಸಲಹೆಗಳನ್ನು ಪಡೆದು ಪ್ರತಿ ತಿಂಗಳು ಪರಿಶೀಲಿಸಿ ಅಗತ್ಯ ಸುಧಾರಣೆಗಳನ್ನು ತರಲಾಗುವುದು ಎಂದರು.
ಈ ವೇಳೆ ದಿವಂಗತ ಡಾ.ಶಾಮನೂರು ಶಿವಶಂಕರಪ್ಪಾಜಿ ಅವರ ಸೇವಾ ಸಂಕಲ್ಪವೇ ನಮಗೆ ಮಾರ್ಗದರ್ಶನ’ ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ನ ಸೇವಾ ಕಾರ್ಯಗಳು ಅವರ ಕೊಡುಗೆ ಎಂದು ನೆನಪಿಸಿಕೊಂಡರು.
- - -
- ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ.
-8ಕೆಡಿವಿಜಿ38: