ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕೆಎಸ್ಡಿಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಮುಖಂಡರಾಗಿ 6 ಬಾರಿ ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾಗಿ ಅನುಭವಿ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಮುಂಬರಲಿರುವ ಸಂಪುಟ ಪುನಾರಚನೆಯಲ್ಲಿ ಅವರನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥರಾದ ಚನ್ನಪ್ಪ ವಿಜಯಕರ ಹಾಗೂ ಪುರಸಭೆ ಸದಸ್ಯ ಶಿವು ಶಿವಪುರಿ ಆಗ್ರಹಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿನಲ್ಲಿ ಮಾತನಾಡಿದ ಅವರು, ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರಿಗೆ ನ್ಯಾಯ ಒದಗಿಸಿಕೊಟ್ಟು, ಚುನಾವಣಾ ಪೂರ್ವದಲ್ಲಿ ಕೊಟ್ಟು ಮಾತು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮೊದಲು ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸ್ಥಾನ ನೀಡುವುದಾಗಿ ಮತಕ್ಷೇತ್ರದ ಜನತೆಗೆ ಬಹಿರಂಗವಾಗಿ ಆಣೆ ಪ್ರಮಾಣ ಮಾಡುವ ಮೂಲಕ ಭರವಸೆ ನೀಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಅವರನ್ನು ಕೈಬಿಡಲಾಯಿತು. ಆದರೆ, ಈ ಬಾರಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅದಕ್ಕಾಗಿ ಸಂಪುಟ ಪುನಾರಚನೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಚಿ ವಿಜಯಕರ ಆಗ್ರಹಿಸಿದರು.ಸಿ.ಎಸ್.ನಾಡಗೌಡರು ಪಕ್ಷದ ಉಪಾಧ್ಯಕ್ಷರಾಗಿ, ವಿಧಾನ ಸಚೇತಕರಾಗಿ, ದೆಹಲಿ ವಿಶೇಷ ಪ್ರತಿನಿಧಿಯಾಗಿ ಪಕ್ಷ ನಿಷ್ಠೆಯಿಂದ ಪಕ್ಷ ಕಟ್ಟುವ ಮೂಲಕ ಕೇಂದ್ರದ ಹಾಗೂ ರಾಜ್ಯದ ಹಲವಾರು ಹಿರಿಯ ಮುಖಂಡರ ಅತ್ಯಂತ ಒಡನಾಡಿ ಬೆಳೆದು ಬಂದವರು. ಕೇವಲ ಪಕ್ಷಕ್ಕಾಗಿ ದುಡಿದಿದ್ದಲ್ಲದೆ, ಕ್ಷೇತ್ರದಲ್ಲಿ ಜನರ ಸಂಕಷ್ಟದಲ್ಲಿಯೂ ಅವರು ಭಾಗಿಯಾಗಿದ್ದಾರೆ ಜತೆಗೆ ನಾಗರಬೆಟ್ಟ ಏತ ನೀರಾವರಿ, ಪೀರಾಪೂರ ಏತ ನೀರಾವರಿ, ದ್ವಿಪಥ ರಸ್ತೆ, ಕೆರೆ ತುಂಬುವ ಯೋಜನೆ, ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಣೆ, ದೇವರಾಜ ಅರಸು ಹೊಸ ಶಾಲೆಗಳ ಮಂಜೂರಾತಿ, ರಸ್ತೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಂತಹ ಹತ್ತು ಹಲವಾರು ಯೋಜನೆಗಳನ್ನು ತಮ್ಮ ಅವಧಿಯಲ್ಲಿ ತರುವ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇದಲ್ಲದೆ, ಕೆಎಸ್ಡಿಎಲ್ ನಿಗಮದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಕೆಎಸ್ಡಿಎಲ್ ನಿಗಮವನ್ನು ಲಾಭದಾಯಕವನ್ನಾಗಿ ಮಾಡಿ ರಾಜ್ಯ ಸರ್ಕಾರಕ್ಕೆ ನೂರಾರು ಕೋಟಿ ರುಪಾಯಿ ನೀಡುವ ಮೂಲಕ ಶ್ರೇಷ್ಟತೆ ಮೆರೆದಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮುಖಂಡರಾದ ಪ್ರಶಾಂತ ಕಾಳೆ, ಪ್ರಕಾಶ ಸರೂರ, ರೇವಣಸಿದ್ದ ಸರೂರ, ಮಂಜುನಾಥ ತಿಳಗೋಳ, ಮಲ್ಲು ಮುದ್ನಾಳ, ಪೀರಪ್ಪ ನೇಬಗೇರಿ ಸೇರಿದಂತೆ ಹಲವರಿದ್ದರು.