ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ವ ಜನರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾಡಪ್ರಭು ಕೆಂಪೇಗೌಡರು ನೀಡಿದ ದೂರ ದೃಷ್ಟಿಯ ಆಡಳಿತ ಎಲ್ಲರಿಗೂ ಮಾದರಿಯಾದದ್ದು ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್.ಸಂದೇಶ್ ಬಣ್ಣಿಸಿದರು.ನಗರದ ಕುಂಬಾರ ವಿದ್ಯಾರ್ಥಿ ನಿಲಯ ಆವರಣದಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಜಾತ್ಯತೀತ ಮನೋಧರ್ಮದ ಕೆಂಪೇಗೌಡರು ಜಾತಿ ಮತ್ತು ವೃತ್ತಿ ಆಧಾರಿತವಾಗಿ ಪೇಟೆಗಳನ್ನು ನಿರ್ಮಿಸಿ ಎಲ್ಲ ವರ್ಗದವರಿಗೆ ಆರ್ಥಿಕ ಭದ್ರತೆ ಒದಗಿಸಿಕೊಟ್ಟರು. ತಮ್ಮ ಆಡಳಿತದಲ್ಲಿ ವಿಕೇಂದ್ರಿಕರಣ ವ್ಯವಸ್ಥೆಯನ್ನು ಜಾರಿಗೊಳಿಸುತ್ತಾ ಗ್ರಾಮ ಸ್ವರಾಜ್ಯದ ಕನಸನ್ನ ನನಸು ಮಾಡಿದ ಮಹಾ ನಾಯಕ ಎಂದು ಬಣ್ಣಿಸಿದರು.500 ವರ್ಷಗಳ ಹಿಂದಿಯೇ ಕೋಟೆ, ಪೇಟೆ, ಕೆರೆ, ಉದ್ಯಾನ ಮತ್ತು ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಸಮಚಿತ್ತ ಆಡಳಿತವನ್ನ ನೀಡಿದ್ದರು. ಇಂದಿಗೂ ಗ್ರಾಮಾಂತರ ಪ್ರದೇಶದ ಅಸಂಖ್ಯಾತ ನಿರುದ್ಯೋಗಿ ಯುವಕರಿಗೆ ಬೆಂಗಳೂರು ಮಹಾನಗರ ಉದ್ಯೋಗ ಕೇಂದ್ರವಾಗಿದೆ. ಕೆಂಪೇಗೌಡರ ದೂರು ದೃಷ್ಟಿಯ ಫಲವನ್ನು ಇಂದಿನ ಯುವ ಜನರು ಅನುಭವಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಯಾವ ಆಡಳಿತಗಾರನಿಗೆ ಸರ್ವಜನಾಂಗದ ಹಿತ, ಜಾತ್ಯತೀತತೆ ಹಾಗೂ ದೂರ ದೃಷ್ಟಿಯ ಮನೋಭಾವ ಇರುತ್ತದೋ ಅಂತಹವರು ಬಹುಕಾಲ ಉಳಿಯುತ್ತಾರೆ. ಇಂತಹ ವ್ಯಕ್ತಿತ್ವದ ನಾಡಪ್ರಭು ಕೆಂಪೇಗೌಡರ ಆಡಳಿತ ಮತ್ತು ಬದುಕು ಅನುಕರಣೀಯವಾಗಿದೆ ಎಂದರು.ಕುಲಕಸುಬು ಅವಲಂಬಿತ ಅತಿ ಹಿಂದುಳಿದ ಸಮುದಾಯಗಳಾದ ಕುಂಬಾರ, ಮಡಿವಾಳ, ಉಪ್ಪಾರ, ನೇಕಾರ, ತಿಗಳ ಸೇರಿದಂತೆ ವಿವಿಧ ಸಮುದಾಯಗಳ ಆರ್ಥಿಕ ಬಲವರ್ಧನೆಯನ್ನು ಕೆಂಪೇಗೌಡರು ಪ್ರತ್ಯೇಕ ಪೇಟೆಗಳನ್ನು ಸ್ಥಾಪಿಸಿ ಎಲ್ಲ ಹಿಂದುಳಿದ ಸಮುದಾಯಗಳಿಗೆ ಆರ್ಥಿಕ ನ್ಯಾಯವನ್ನು ಒದಗಿಸಿದ್ದು, ಅವರಲ್ಲಿನ ಸಾಮಾಜಿಕ ನ್ಯಾಯದ ಮನೋಭಾವನಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಖಜಾಂಚಿ ಬಿ.ಎಂ.ಅಪ್ಫಾಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಕರವೇ ಜಯರಾಂ, ಮಂಜು ಕಮ್ಮನಾಯಕನಹಳ್ಳಿ, ಗುಡಿಗೇನಹಳ್ಳಿ ಚಂದ್ರಶೇಖರ್ ಆರಾಧ್ಯ, ಡಿ.ದೇವರಾಜ ಕೊಪ್ಪ, ಮಂಗಲ ಎಂ.ಕೃಷ್ಣ, ನಾರಾಯಣಸ್ವಾಮಿ, ಉಮ್ಮಡಹಳ್ಳಿ ನಾಗೇಶ್, ಮಂಚಶೆಟ್ಟಿ, ಶೇಖರ್ ಹನಿಯಂಬಾಡಿ, ಬೊಮ್ಮೇಗೌಡ, ನಂಜುಂಡಶೆಟ್ಟಿ, ಪ್ರದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.