ಕನ್ನಡಪ್ರಭ ವಾರ್ತೆ ಆಲೂರು
ನಾಡಪ್ರಭು ಕೆಂಪೇಗೌಡರು ತಮ್ಮ ಜೀವಿತಾವಧಿಯಲ್ಲಿ ಪ್ರತಿಯೊಂದು ಸಮುದಾಯದ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ಸಿ.ಪಿ ನಂದಕುಮಾರ್ ಹೇಳಿದರು.ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಪ್ರತಿಯೊಂದು ಸಮುದಾಯದ ಅಭಿವೃದ್ಧಿ ಹಾಗೂ ಧಾರ್ಮಿಕವಾಗಿ ಹಲವು ರೀತಿಯ ಕೊಡುಗೆ ನೀಡಿದ್ದಾರೆ. ನೂರಾರು ವರ್ಷಗಳ ಹಿಂದೆಯೇ ದನಕರು, ಪ್ರಾಣಿಪಕ್ಷಿಗಳು ನೀರು ಕುಡಿಯಲು ನೀರಿನ ತೊಟ್ಟಿಗಳು ಹಾಗೂ ರೈತರ ಅನುಕೂಲಕ್ಕಾಗಿ ಕೆರೆಕಟ್ಟೆಗಳ ನಿರ್ಮಾಣ ಮಾಡಿದ ಗೌಡರು, ತಮ್ಮ ಅಧಿಕಾರದಲ್ಲಿ ಜಾತ್ಯಾತೀತ ಮನೋಭಾವನೆಯೊಂದಿಗೆ ಆಳ್ವಿಕೆ ಮಾಡಿದ ಹೆಗ್ಗಳಿಕೆ ಅವರದು ಎಂದು ತಿಳಿಸಿದರು.ಸಾಹಿತಿ ಕೊಟ್ರೇಶ್ ಉಪ್ಪಾರ್ ಮಾತನಾಡಿ, ಕೆಂಪೇಗೌಡರು ಕೆಂಪನಂಜೇಗೌಡರ ಮಗನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದವರು. ಕೆಂಪೇಗೌಡರು ನೂರಾರು ವರ್ಷಗಳ ಹಿಂದೆಯೇ ತಮ್ಮ ಕನಸಿನ ಬೆಂಗಳೂರನ್ನು ಕಟ್ಟಿ ಬೆಳೆಸಿದ್ದರು. ಬೆಂಗಳೂರು ನಗರ ಇಂದು ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಎಲ್ಲ ಜಾತಿ, ಮತ, ಧರ್ಮ, ಪಂಥಗಳಿಗೆ ಸೇರಿದ ಜನರನ್ನು ಇದು ಒಳಗೊಂಡಿದೆ. ಇಂತಹ ಮಹಾನಗರವನ್ನು ಸ್ಥಾಪಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ತಾಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ:ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಆಲೂರು ತಾಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡಬೇಕೆಂಬ ಆಶಯ ಹೊಂದಿದ್ದು, ತಹಸೀಲ್ದಾರ್ ನೇತೃತ್ವದಲ್ಲಿ ಒಕ್ಕಲಿಗ ಸಮಾಜ ಸೇರಿ ಎಲ್ಲ ಸಮುದಾಯಗಳ ಸಹಕಾರದಿಂದ ಆಲೂರು ಪಟ್ಟಣದ ಕೇಂದ್ರದಲ್ಲಿ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ತಾಪಂ ಸಿಇಒ ಪಿ.ಶ್ರೀನಿವಾಸ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಚ್.ಪಿ ಮೋಹನ್, ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಡಾ.ಜಯರಾಜ್, ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಾಚಾರ್,ತಾಲೂಕು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ, ಡಿಎಸ್ಎಸ್ ಹಿರಿಯ ಮುಖಂಡ ಗೆಕರವಳ್ಳಿ ಬಸವರಾಜು,ತಾಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ, ಸಿಡಿಪಿಒ ಮಲ್ಲೇಶ್, ಶಿಕ್ಷಣ ಇಲಾಖೆ ರುದ್ರೇಶ್, ಬಿಜೆಪಿ ಮುಖಂಡ ಹನುಮಂತೇಗೌಡ ಸೇರಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.