ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ

KannadaprabhaNewsNetwork |  
Published : Jan 18, 2025, 12:45 AM IST
ಪೊಟೋ೧೭ಸಿಪಿಟಿ೧: ಚನ್ನಟಪ್ಟಣದ ಅಯ್ಯನಗುಡಿ ಜಾತ್ರೆಯಲ್ಲಿ ಸೇರಿರುವ ಜನ. | Kannada Prabha

ಸಾರಾಂಶ

ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಈ ಬಾರಿ ಕಳೆಕಟ್ಟಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ರಾಸುಗಳನ್ನು ಕೊಳ್ಳಲು ಮಾರಲು ಜನ ಮುಗಿ ಬಿದ್ದಿದ್ದಾರೆ.

ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಈ ಬಾರಿ ಕಳೆಕಟ್ಟಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ರಾಸುಗಳನ್ನು ಕೊಳ್ಳಲು ಮಾರಲು ಜನ ಮುಗಿ ಬಿದ್ದಿದ್ದಾರೆ.

ಅಯ್ಯನಗುಡಿ ದನಗಳ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಪುರಾಣ ಪ್ರಸಿದ್ದ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಈ ವರ್ಷ ಕಳೆಕಟ್ಟಿದೆ. ಜಾತ್ರೆಯಲ್ಲಿ ನಾಟಿ ದನಗಳ ಹೆಜ್ಜೆ ಸಪ್ಪಳ ಜೋರಾಗಿದ್ದು, ವ್ಯಾಪಾರವೂ ಭರ್ಜರಿಯಾಗಿದೆ. ಈ ಬಾರಿ ವಿವಿಧ ತಳಿಯ ರಾಸುಗಳೊಂದಿಗೆ ರೈತರು ಬೀಡುಬಿಟ್ಟಿದ್ದಾರೆ.

ರಾಸುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಜಿಲ್ಲೆಯ ರೈತರು ಮಾತ್ರವಲ್ಲದೆ ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧೆಡೆಯಿಂದ ರೈತರು ಆಗಮಿಸಿದ್ದಾರೆ. ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣದಿಂದಲೂ ರೈತರು ಹಾಗೂ ವರ್ತಕರು ಆಗಮಿಸಿ ರಾಸುಗಳನ್ನು ಕೊಳ್ಳುವ ಮಾರುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.

ದೇವಸ್ಥಾನದ ಬಳಿ ಇರುವ ನೀಲಗಿರಿ ತೋಪು ಹಾಗೂ ರಸ್ತೆಯ ಎರಡು ಮಗ್ಗಲುಗಳಲ್ಲೂ ರೈತರು ತಮ್ಮ ರಾಸುಗಳನ್ನು ಕಟ್ಟಿದ್ದಾರೆ. ಕೆಲವರು ಪೆಂಡಾಲ್ ಹಾಕಿಸಿ ಎತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕೆಲ ರೈತರು ರಾಸುಗಳನ್ನು ಅಲಂಕರಿಸಿ ತಮಟ ವಾದ್ಯ, ಪೂಜಾ ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದಿದ್ದಾರೆ.

ದುಬಾರಿ ಬೆಲೆಯ ಹಳ್ಳಿಕಾರ್ ಎತ್ತುಗಳು: ಜಾತ್ರೆಯಲ್ಲಿ ೫೦ ಸಾವಿರದಿಂದ ೧೮ ಲಕ್ಷದವರೆಗಿನ ರಾಸುಗಳನ್ನು ನೋಡಬಹುದಾಗಿದೆ. ಎಚ್. ಎಲ್.ಪಾರ್ಥಸಾರಥಿ ಹಾಗೂ ಕಣಿಮಿಣಿಕೆ ನಾಗೇಶ್ ಮಾಲೀಕತ್ವದ ಎತ್ತುಗಳನ್ನು ೧೮ ಲಕ್ಷ ರು.ಗೆ ಮಾರಾಟಕ್ಕಿಡಲಾಗಿದೆ. ಕನಕಪುರದ ಇಂದ್ರೇಶ್ ಎಂಬುವವರ ಜೋಡೆತ್ತುಗಳು (ಬಂಡಿ) ೧೪ ಲಕ್ಷ ರೂ. ಹಾಗೂ ಹಿರಿಯೂರಿನ ಸಂದೀಪ್ ಅವರ ಜೋಡೆತ್ತುಗಳು ೧೨ ಲಕ್ಷ ರು.ಗಳಿಗೆ ದುಬಾರಿ ಬೆಲೆಯ ಎತ್ತುಗಳು ಎನ್ನಿಸಿವೆ.

ಉತ್ತಮ ರಾಸುಗಳಿಗೆ ಪದಕ:

ಜಾತ್ರೆಗೆ ಆಗಮಿಸುವ ರಾಸುಗಳ ಪೈಕಿ ಉತ್ತಮ ರಾಸುಗಳನ್ನು ಗುರುತಿಸುವ ಸಲುವಾಗಿ ರಾಸುಗಳ ಸ್ಪರ್ಧೆ ಏರ್ಪಡಿಲಾಗಿದೆ. ಇದರಲ್ಲಿ ನೊಂದಾಯಿಸಿಕೊಂಡ ರಾಸುಗಳಿಗೆ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ, ಪಾರಿತೋಷಕ, ಬೆಳ್ಳಿ ಪದಕ ನೀಡಲಾಗುತ್ತದೆ.

ಜಾತ್ರೆಗೆ ಆಗಮಿಸುವವರ ಸಂಖ್ಯೆಯಲ್ಲೂ ಹೆಚ್ಚಳ: ಗ್ರಾಮೀಣ ಭಾಗದಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಾ, ಬೆರಳೆಣಿಕೆ ರಾಸುಗಳನ್ನು ನೋಡುವ ದಿನಗಳಲ್ಲಿ ಲಕ್ಷಾಂತರ ಬೆಲೆಯ ಕಣ್ಕುಕ್ಕುವ ಎತ್ತುಗಳನ್ನು ನೋಡಲು ಜಿಲ್ಲೆಯ ಮೂಲೆಮೂಲೆಗಳಿಂದ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಎತ್ತುಗಳ ಮುಂದೆ ನಿಂತು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ವಿದ್ಯುತ್ ಅಲಂಕಾರ: ಇನ್ನು ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ. ಬೆಂ-ಮೈ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ದನಗಳ ಜಾತ್ರೆ ಗಮನ ಸೆಳೆಯುತ್ತಿದೆ.

ಕೋಟ್...

ಕಳೆದ ಕೆಲ ವರ್ಷಗಳಿಂದ ಕೋವಿಡ್ , ರಾಸುಗಳಿಗೆ ಚರ್ಮಗಂಟು ರೋಗ ಸೇರಿ ಹವಲು ಕಾರಣಗಳಿಂದ ಕೆಂಗಲ್ ದನಗಳ ಜಾತ್ರೆ ಕಳೆಗುಂದಿತ್ತು. ಆದರೆ ದೇವರ ದಯೆಯಿಂದಾಗಿ ಈ ಬಾರಿ ಯಾವುದೇ ರೀತಿಯ ಸಮಸ್ಯೆಗಳಾಗದೆ ದನಗಳ ಜಾತ್ರೆ ಸುಸೂತ್ರವಾಗಿ ನಡೆಯುತ್ತಿದ್ದು, ಭಕ್ತರೊಟ್ಟಿಗೆ ಸಾರ್ವಜನಿಕರು, ರೈತರು, ವ್ಯಾಪಾರಿಗಳು, ದಲ್ಲಾಳಿಗಳು ನಮ್ಮ ನೀರಿಕ್ಷೆಗೂ ಮೀರಿ ಆಗಮಿಸುತ್ತಿರುವುದು ಸಂತಸ ತಂದಿದೆ.

-ವಿ.ಬಿ. ಚಂದ್ರು, ಅಧ್ಯಕ್ಷರು, ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ ಮೇಲುಸ್ತುವಾರಿ ಸಮಿತಿ

ಪೊಟೋ೧೭ಸಿಪಿಟಿ೧: ಚನ್ನಟಪ್ಟಣದ ಅಯ್ಯನಗುಡಿ ಜಾತ್ರೆಯಲ್ಲಿ ಸೇರಿರುವ ಜನ.

ಪೊಟೋ೧೭ಸಿಪಿಟಿ2: ಚನ್ನಪಟ್ಟಣದ ಅಯ್ಯನಗುಡಿ ಜಾತ್ರೆಯಲ್ಲಿ ೧೮ಲಕ್ಷಕ್ಕೆ ಮಾರಾಟಕ್ಕೆ ಇಟ್ಟಿರುವ ಎತ್ತುಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!