ಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿ ವರಿಷ್ಟರ ಸೂಚನೆಯಂತೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹಿಳಾ ಮೋರ್ಚದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರ ನೇತೃತ್ವದಲ್ಲಿ 25 ರಾಷ್ಟ್ರೀಯ ನಾಯಕಿಯರು ದೇಶದ ವಿವಿಧ ರಾಜ್ಯ, ಜಿಲ್ಲೆಗಳಲ್ಲಿ ಪ್ರವಾಸ ನಡೆಸುತ್ತಿದ್ದಾರೆ.ಅದರಂತೆ ಉಡುಪಿಗೆ ಆಗಮಿಸಿದ ಕೇರಳ ರಾಜ್ಯದ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ, ನ್ಯಾಯವಾದಿ ರೂಪಾ ಬಾಬು ಅವರನ್ನು ಉಡುಪಿ ಜಿಲ್ಲಾ ಮಹಿಳಾಮೋರ್ಚದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು.ನಂತರ ರೂಪಾ ಬಾಬು ಅವರು ಉಡುಪಿ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ನಿಟ್ಟೂರು ವಾರ್ಡಿನ ಅಂಗನವಾಡಿಗೆ ಭೇಟಿ ನೀಡಿ, ಅಲ್ಲಿನ ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳ ಪೋಷಕರೊಂದಿಗೆ ಮಾತುಕತೆ ನಡೆಸಿದರು.
ಉಡುಪಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಕ್ಕೆ ಭೇಟಿ ನೀಡಿ ಅಲ್ಲಿನ ಹೊಸ ಯುವ ಮತದಾರರಾದ ವಿದ್ಯಾರ್ಥಿಗಳೊಂದಿಗೆ, ಹೇರೂರು ನಂದಿನಿ ಉದ್ಯಮಕ್ಕೆ ಭೇಟಿ ನೀಡಿ ಮಹಿಳಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.ಬ್ರಹ್ಮಾವರ ಗ್ರಾಮಾಂತರದ ಉಪ್ಪೂರು ಗ್ರಾಮ ಪಂಚಾಯಿತಿಯ ಲಕ್ಷ್ಮಿನಗರದ ಅಂಗನವಾಡಿ ಬಳಿ ಕೇಂದ್ರ ಸರಕಾರದ ಮಹಿಳಾ ಯೋಜನೆಗಳ ಬಗ್ಗೆ ಫಲಾನುಭವಿಗಳೊಂದಿಗೆ ಮತ್ತು ಮಹಿಳಾ ಮೋರ್ಚಾದ ಸದಸ್ಯರೊಂದಿಗೆ ಸಂವಾದ ನಡೆಸಿದರು.ಮಧ್ಯಾಹ್ನ ಮಹಿಳಾ ಮೋರ್ಚದ ಕಾರ್ಯಕರ್ತೆಯರ ಮನೆಯಲ್ಲಿ ಸಹಭೋಜನ ನಡೆಸಿದರು. ಸಂಜೆ ಮಲ್ಪೆಯ ಕೊಳ ವಾರ್ಡಿನಲ್ಲಿ ಮಹಿಳಾ ಬೂತ್ ಸಮಿತಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.ಅವರೊಂದಿಗೆ ಜಿಲ್ಲಾ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾದ ಪ್ರ. ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಇತರ ನಾಯಕಿಯರಾದ ವಸಂತಿ ಸತೀಶ್ ಪೂಜಾರಿ, ಪ್ರೀತಿ, ರಜನಿ ಹೆಬ್ಬಾರ್, ಅಶ್ವಿನಿ ಶೆಟ್ಟಿ, ಶೋಭಾ ಪೂಜಾರಿ, ಮಮತಾ ಶೆಟ್ಟಿ ಮತ್ತಿತರರಿದ್ದರು.