ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು ನೇತೃತ್ವದಲ್ಲಿ ಪಟ್ಟಣದ ಮೈಸೂರು- ಬೆಂಗಳೂರು ಹೆದ್ದಾರಿ ಬಳಿಯ ಕುವೆಂವು ಪುತ್ಥಳಿ ಬಳಿ ಸೇರಿದದ ಕಾರ್ಯಕರ್ತರು ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿದರು.
ನೂರಾರು ವರ್ಷಗಳಿಂದ ಕಾಸರಗೋಡಿನಲ್ಲಿ ಕನ್ನಡ ಮಾದ್ಯಮ ಶಾಲೆಗಳು ನಡೆಯುತ್ತಿದ್ದು, ಕನ್ನಡವೇ ಸಾರ್ವಭೌಮ ಎನ್ನುತ್ತಿರುವಾಗ ಕೇರಳ ಸರ್ಕಾರ ಇದೀಗ ಕನ್ನಡ ಶಾಲೆಗಳನ್ನು ಮುಚ್ಚುವ ಜೊತೆಗೆ ಕೇರಳ ಭಾಷೆಗೆ ಆದ್ಯತೆ ನೀಡಲು ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಕೇರಳ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಕನ್ನಡ ಶಾಲೆಗಳ ಉಳಿಸುವ ಪ್ರಯತ್ನ ಮಾಡಬೇಕು. ಹೊಸದಾಗಿ ನಿಯಮ ಜಾರಿ ಮಾಡಿ ಕಾಸರಗೋಡಿನಲ್ಲಿ ಕನ್ನಡಕ್ಕೆ ಕುತ್ತು ತರುವ ಯತ್ನ ಮಾಡಿ ಕನ್ನಡಿಗರನ್ನು ಕೆರಳುವಂತೆ ಮಾಡಿದ್ದು ಇದನ್ನು ರಾಜ್ಯ ಸರ್ಕಾರ ತಡೆದು ನಮ್ಮ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆದರೆ ಕಾಸರಗೋಡಿಗೂ ನಮ್ಮ ಕಾರ್ಯಕರ್ತರು ಪ್ರಯಾಣ ಬೆಳೆಸಿ ಕೇರಳ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಪುರುಷೋತ್ತಮ, ಬೌದ್ಧ ಮಹಾಸಭಾ ಅಧ್ಯಕ್ಷ ಕೆ.ಟಿ.ರಂಗಯ್ಯ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಯರಾಮು, ಗ್ರಾಪಂ ಸದಸ್ಯ ಅಪ್ಪಾಜಿ, ರವಿಕಕುಮಾರ್, ಕಡತನಾಳು ಜಯಶಂಕರ್, ಪದಾಧಿಕಾರಿಗಳಾದ ಕೆಆರ್ಸ್ ಚಂದ್ರು, ಕರವೇ ಬಸವರಾಜು, ಉಮಾಶಂಕರ್, ದಿನೇಶ್, ಸೀತಾರಾಮು ಸೇರಿದಂತೆ ಇತರರು ಇದ್ದರು.