ಕನ್ನಡ ಪ್ರಭ ವಾರ್ತೆ ನಾಯಕನಹಟ್ಟಿಹಿರೇಕೆರೆಯಲ್ಲಿ ಗುರುವಾರ ಊರಿನ ಹಿರಿಯರು ಸಾಂಪ್ರದಾಯಿಕ ಕೆರೆಗಂಗಮ್ಮ ಉತ್ಸವ ಆಚರಿಸಿದರು. ಕೆರೆ ಗಂಗಮ್ಮ ಉತ್ಸವ ಕೃಷಿ ಪ್ರಧಾನ ಆಚರಣೆ ಆಗಿದ್ದು, ಹಿರೇಕರೆ ಏರಿ ಮಧ್ಯದಲ್ಲಿ ಜೋಡಿ ವಿಗ್ರಹಗಳಿಗೆ ಕೆರೆಯ ನೀರಿನಿಂದ 108 ಕೊಡಗಳಿಂದ ಅಭಿಷೇಕ ಮಾಡಲಾಗುತ್ತದೆ.
ಗುರುವಾರ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠದಿಂದ ಮಠದ ಗೂಳಿಯನ್ನು (ಬಸವಣ್ಣ) ಪಟ್ಟಪೀತಾಂಬರದಿಂದ ಅಲಂಕರಿಸಲಾಗಿತ್ತು. ಬಸವಣ್ಣನ ಜತೆಗೆ ಕುಂಭಹೊತ್ತ ಮಹಿಳೆಯರು, ಊರ ಜನರು ಹಟ್ಟಿಯಿಂದ 6ಕಿ.ಮೀ. ದೂರದ ಹಿರೇಕೆರೆಯತ್ತ ಹೆಜ್ಜೆಹಾಕಿದರು. ಡೋಲು-ಡಮರುಗ, ಶಹನಾಯಿ, ನಂದಿಕೋಲು ಸಹಿತ ಹಟ್ಟಿ ಜನರು ಹಿರೆಕೆರೆಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಿದರು. ನಂತರ ಜನರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು. ವ್ಯಾಪ್ತಿಯಲ್ಲಿ ಸಮೃದ್ಧ ಮಳೆ, ಬೆಳೆ ಆಗಲೆಂದು ಹಟ್ಟಿ ಜನರು ದೇವರಲ್ಲಿ ಪ್ರಾರ್ಥಿಸಿಕೊಂಡರು.ಹಿರಿಯ ಮುಖಂಡ ಕಾವಲಪ್ಪರ ತಿಪ್ಪೇರುದ್ರಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ಕೆರೆಗಂಗಮ್ಮ ಉತ್ಸವವನ್ನು ನಮ್ಮ ಪೂರ್ವಜನರು ನಡೆಸಿಕೊಂಡು ಬಂದಿದ್ದಾರೆ. ಅವರ ಹಾದಿಯಲ್ಲಿ ಈಗಿನ ಹಟ್ಟಿ ಜನರು ಕೆರೆ ಉತ್ಸವ ಹಮ್ಮಿಕೊಂಡು ಆಚರಿಸುತ್ತಿದ್ದಾರೆ. ಬಸವಮೂರ್ತಿಗಳ ಜತೆಗೆ ಕೆರೆಪೂಜೆ ಇಲ್ಲಿ ಪ್ರಧಾನ ಆಗಿರುತ್ತದೆ ಎಂದರು.ಪಪಂ ಸದಸ್ಯ ಜಿ.ಆರ್. ರವಿಕುಮಾರ್, ರುದ್ರೇಶ್ ಗೌಡ್ರು, ಕೆ.ಟಿ.ಸ್ವಾಮಿ, ಗಿರಿಯಪ್ಪ, ಉಮೇಶ್, ಅಂಬರೀಶ್, ಮಹದೇವಿ ಬಸ್ ಮಾಲೀಕ ರಾಜಣ್ಣ, ವಿಜಯ್ ಕುಮಾರ್, ಮಹಾಂತಣ್ಣ ಹಾಜರಿದ್ದರು.