ವಿದ್ಯಾರ್ಥಿನಿ ಹತ್ಯೆ, ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹ

KannadaprabhaNewsNetwork | Published : Apr 26, 2024 12:51 AM

ಸಾರಾಂಶ

ಕಾಂಗ್ರೆಸ್ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಹೊರಗೆ ಹೋದ ಹಿಂದೂ ಯುವತಿಯರು, ಸುರಕ್ಷಿತವಾಗಿ ಮನೆಗೆ ಮರಳುವ ಕುರಿತು ಭರವಸೆ ಮೂಡುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ರಾಜ್ಯ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ ಆಗ್ರಹಿಸಿದರು.

ಬ್ಯಾಡಗಿ: ಕಾಂಗ್ರೆಸ್ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಹೊರಗೆ ಹೋದ ಹಿಂದೂ ಯುವತಿಯರು, ಸುರಕ್ಷಿತವಾಗಿ ಮನೆಗೆ ಮರಳುವ ಕುರಿತು ಭರವಸೆ ಮೂಡುತ್ತಿಲ್ಲ. ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಮಹಿಳೆಯರು ತಲೆ ತಗ್ಗಿಸುವಂತಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ರಾಜ್ಯ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ ಆಗ್ರಹಿಸಿದರು.

ಹಾವೇರಿ ಲೋಕಸಭೆ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು,

ದೇಶದಲ್ಲಿ ಮಹಿಳೆಗೆ ಅತ್ಯಂತ ಗೌರವ ನೀಡಲಾಗುತ್ತಿದೆ, ಆದರೆ ಮುಸ್ಲಿಂ ವರ್ಗದ ಓಲೈಕೆಗೆ ಇಳಿದಿರುವ ಕಾಂಗ್ರೆಸ್ ತನ್ನದೇ ಪಕ್ಷದ ಮಾಜಿ ಶಾಸಕ ದಲಿತ ಮುಖಂಡ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದೆ. ಅಂತಯೇ ನೇಹಾ ಹತ್ಯೆ ಪ್ರಕರಣವನ್ನು ಬಹಳಷ್ಟು ಹಗುರವಾಗಿ ಪರಿಗಣಿಸಿದ್ದು ಹಿಂದೂ ಮಹಿಳೆಯರ ಮಾನ ಪ್ರಾಣ ಕಾಪಾಡಲು ಕೈಗೊಂಡ ಕಾರ್ಯಕ್ರಮಗಳೇನು..? ಎಂದು ಪ್ರಶ್ನಿಸಿದರು.ಬಸವರಾಜ ಬೊಮ್ಮಾಯಿ ಪತ್ನಿ ಚನ್ನಮ್ಮ ಮಾತನಾಡಿ, ಕಾಂಗ್ರೆಸ್ ಕೊಡುಗೆಗಳ ಹಿಂದೆ ದೇಶವನ್ನು ಅಧಃಪತನಕ್ಕಿಳಿಸುವ ಹುನ್ನಾರವಿದೆ. ಬಹುಮತ ಪಡೆಯುವಷ್ಟು ಕ್ಷೇತ್ರಗಳಿಗೆ ಸ್ಪರ್ಧಿಸದಿದ್ದರೂ ಸಹ ಪ್ರತೀ ಕುಟುಂಬಕ್ಕೆ 1 ಲಕ್ಷ ನೀಡುವುದಾಗಿ ಬೋಗಸ್ ಹೇಳಿಕೆಯನ್ನು ಮಹಿಳೆಯರು ನಂಬದಂತೆ ಮನವಿ ಮಾಡಿದ ಅವರು, ಸುಭದ್ರ ಸರ್ಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.

ಈ ವೇಳೆ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪತ್ನಿ ಶಶಿಕಲಾ ಪಾಟೀಲ, ಬಿಂದೂ ಬೊಮ್ಮಾಯಿ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ, ಗಾಯತ್ರಿ ರಾಯ್ಕರ್, ಫಕ್ಕೀರಮ್ಮ ಛಲವಾದಿ, ಗೌರಮ್ಮ ಪ್ಯಾಟಿ, ಜ್ಯೋತಿ ಕುದರಿಹಾಳ, ಗಿರಿಜಾ ಪಟ್ಟಣಶೆಟ್ಟಿ, ಗುತ್ತೆಮ್ಮ ಮಾಳಗಿ ಸೇರಿದಂತೆ ಇನ್ನಿತರರಿದ್ದರು.

Share this article