ಕನ್ನಡಪ್ರಭ ವಾರ್ತೆ ಮೂಲ್ಕಿ
ಸಂಶೋಧನೆ ಸಾಹಿತ್ಯ ಪ್ರಕಾಶನ ಪತ್ರಿಕೋದ್ಯಮ, ಯಕ್ಷಗಾನ ಕಲೆ ದೇವಸ್ಥಾನ ನಾಗಾರಾಧನೆಗಳ ಅಧ್ಯಯನ ಬರಹ ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕೆ. ಎಲ್. ಕುಂಡಂತಾಯರ ಸಾಧನೆ ಅಭಿನಂದನೀಯವಾದು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.ಕಿನ್ನಿಗೋಳಿಯ ನೇಕಾರಸೌಧ ಸಭಾಭವನದಲ್ಲಿ ಜರುಗಿದ ಕಿನ್ನಿಗೋಳಿಯ ಅನಂತ ಪ್ರಕಾಶ ಮಾಸಪತ್ರಿಕೆ - ಪ್ರಕಾಶನ - ಮುದ್ರಣಾಲಯ ಸಂಸ್ಥೆಯ 29ನೇ ವರ್ಷಾಚರಣೆಯ ಸಂಭ್ರಮದ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿ, ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರಿಗೆ 10 ಸಾವಿರ ರು. ನಗದು, ಅಭಿನಂದನಾ ಕೃತಿ ಸಮರ್ಪಣೆ ಸಹಿತ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಮಾಡಲಾಯಿತು.ಅನಂತ ಪ್ರಕಾಶ ಪುರಸ್ಕಾರ ಸ್ವೀಕರಿಸಿ ಕೆ.ಎಲ್.ಕುಂಡಂತಾಯ ಮಾತನಾಡಿ, ಸಾಧನೆಗೆ ಸಾಧ್ಯತೆಗಳನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ಅಧ್ಯಯನಾಸಕ್ತಿ ರೂಢಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.ಕೃತಿಗಳನ್ನು ಕೊಂಡು ಓದುವುದಷ್ಟೇ ಅಲ್ಲದೆ ಆ ಬರಹಗಾರರಿಗೆ ಅಭಿಪ್ರಾಯ ತಿಳಿಸುವುದು ಅಗತ್ಯ ಎಂದು ಧರ್ಮದರ್ಶಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು. ಕುಂಡಂತಾಯರ ಅಭಿನಂದನಾ ಕೃತಿ ಸಹಿತ ಅನಂತ ಪ್ರಕಾಶ ವಿಶೇಷ ಸಂಚಿಕೆ ಹಾಗೂ ‘ವ್ಯಂಗ್ಯ ಬದುಕು’ ಶಿಂಗಣ್ಣ ಖ್ಯಾತಿಯ ಕನ್ನೆಪ್ಪಾಡಿ ರಾಮಕೃಷ್ಣ ಶಾಸ್ತ್ರಿ ಅವರ ವ್ಯಂಗ್ಯಚಿತ್ರಗಳನ್ನೊಳಗೊಂಡ ಇಂಗ್ಲೀಷ್ ಅನುವಾದ ‘ಎ ಲೈಫ್ ಟೈಮ್ ಆಫ್ ಸೆಟಾಯರ್’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಕೆ.ಎಲ್.ಕುಂಡಂತಾಯ ಅವರ ಪತ್ನಿ ಪುಷ್ಪಲತಾ, ಮುಳಿಯ ಗೋಪಾಲಕೃಷ್ಣ ಭಟ್, ಸಾಹಿತಿ ಮನೋರಮಾ ಎಂ.ಭಟ್, ರಾಘವೇಂದ್ರ ಮುಳಿಯ, ಡಾ. ಅರುಣ್ ಎಂ.ಇಸ್ಲೂರು, ಉದ್ಯಮಿ ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಅನಂತ ಪ್ರಕಾಶ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಇದ್ದರು.ಶಕುನ ಉಡುಪ ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಬ್ರಹ್ಮಣ್ಯ ಬೈಪಡಿತ್ತಾಯ ನೇತೃತ್ವದ ನಂದಳಿಕೆ ವಿಶಾಲ ಯಕ್ಷಕಲಾ ಬಳಗ ಇವರಿಂದ ‘ಖಳರಾಯ ಸಾಲ್ವ’ ಯಕ್ಷಗಾನ ತಾಳಮದ್ದಲೆ ಹಾಗೂ ಸೀತಾರಾಮ ಕುಮಾರ್ ಕಟೀಲು ಇವರ ನೂಪುರ ಕಲಾತಂಡದ ಕಲಾವಿದರಿಂದ ‘ಚಂದ್ರಾವಳಿ ವಿಲಾಸ’ ಬಡಗುತಿಟ್ಟು ಯಕ್ಷಗಾನ ಪ್ರದರ್ಶನಗೊಂಡಿತು.