ಕನ್ನಡಪ್ರಭ ವಾರ್ತೆ ಮೂಲ್ಕಿ
ಸ್ವಾಮಿ ವಿವೇಕಾನಂದರು ಯುವ ಪೀಳಿಗೆಗೆ ಆದರ್ಶರಾಗಿದ್ದು, ಯುವ ಜನಾಂಗ ಮೊಬೈಲ್, ಸಾಮಾಜಿಕ ಜಾಲತಾಣದ ಬಗ್ಗೆ ಜಾಗೃತರಾಗಿ ಕಠಿಣ ಪರಿಶ್ರಮ ವಹಿಸಿ ಸಾಧಕರಾಗಬೇಕೆಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವದ ಅಂಗವಾಗಿ ಕಿನ್ನಿಗೋಳಿ ಚರ್ಚ್ ಮೈದಾನದ ವೇದಿಕೆಯಲ್ಲಿ ನಡೆದ ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ವಹಿಸಿದ್ದರು. ಕಿನ್ನಿಗೋಳಿ ಕೊಸೆ ಸಾಂವ್ ಚರ್ಚ್ ಸಹಾಯಕ ಧರ್ಮಗುರು ಲ್ಯಾನ್ಸಿ ಸಲ್ದಾನ್ಹ ಕಾರ್ಯಕ್ರಮ ಉದ್ಘಾಟಿಸಿದರು.ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರಧಾನಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಯಕದಲ್ಲಿ ಸಾಧಕರಾದ ವಾಸುದೇವ ಆಚಾರ್ಯ ಕಲ್ಲಮುಂಡ್ಕೂರು (ಶಿಲ್ಪಕಲೆ), ಶಿವಾನಂದ ಸಾಲ್ಯಾನ್ (ಕ್ಷೌರಿಕ ವೃತ್ತಿ), ವೆಂಕಪ್ಪ ನಾಯ್ಕ ಪುತ್ತಿಗೆ ಪದವು (ರುದ್ರಭೂಮಿ ಕಾಯಕ), ಯಾದವ ಪೂಜಾರಿ (ದೈವ ದರ್ಶನ ಪಾತ್ರಿ), ವಿಶ್ವನಾಥ ಮಡಿವಾಳ ಕವತ್ತಾರು (ದೀವಟಿಕೆ ಹಿಡಿಯುವವರು), ಲಕ್ಷ್ಮೀ ಎಸ್. ಪೂಜಾರಿ ಮುಂಡ್ಕೂರು (ಗ್ರಾಮೀಣ ಅಂಚೆ ವಿತರಕರು), ಶಂಕರ್ ಕೆ. ಪುತ್ತೂರು ಕಾವು (ಭಾರತೀಯ ಸೈನಿಕ ಸೇವೆ), ಆನಂದ ಶೆಟ್ಟಿಗಾರ ಅಂಗಾರಗುಡ್ಡೆ (ನೇಕಾರ ವೃತ್ತಿ ಕೈಮಗ್ಗ), ಪ್ರಕಾಶ್ ಆಚಾರ್ಯ ಕಿನ್ನಿಗೋಳಿ (ಕಲಾ ರಂಗ), ಮಾಧವ ಆಚಾರ್ಯ ನೀರುಡೆ (ಕಮ್ಮಾರ), ದಿವಾಕರ ಚೌಟ ಉಳೆಪಾಡಿ (ಕಂಬಳ ಕ್ಷೇತ್ರ), ಲಲಿತಾ ಶೆಟ್ಟಿ ಏಳಿಂಜೆ (ಹೈನುಗಾರಿಕೆ), ಸತೀಶ್ ಶೆಟ್ಟಿ ಬೈಲಗುತ್ತು (ಪ್ರಗತಿಪರ ಕೃಷಿಕ) ಅವರಿಗೆ ವಿವೇಕ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಹುಮುಖ ಸಾಧಕರ ನೆಲೆಯಲ್ಲಿ ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ವೈದ್ಯಕೀಯ ಸೇವೆಗಾಗಿ ಡಾ. ಭಗಿನಿ ಜೀವಿತಾ ಅವರನ್ನು ಅಭಿನಂದಿಸಲಾಯಿತು.
ಯೋಗ, ಯಕ್ಷಗಾನ, ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಕ್ಷಿತಿಜ್ ಕೆ. ಹಾಗೂ ಅತ್ಯುತ್ತಮ ಸೇವಾ ಸಂಸ್ಥೆಗಳಾದ ಶ್ರೀರಾಮ ಯುವಕ ವೃಂದ ಗೋಳಿಜೋರ, ಶ್ರೀ ದೇವಿ ಮಹಿಳಾ ಮಂಡಳಿ ತೋಕೂರು ಸಂಸ್ಥೆಯನ್ನು ಗೌರವಿಸಲಾಯಿತು. ಅಖಿಲ ಕರ್ನಾಟಕ ಕರಾವಳಿ ಒಕ್ಕೂಟ ಗೌರವಾಧ್ಯಕ್ಷ ಹಾಗೂ ಸಾಹಿತಿ ಡಾ.ಎಸ್. ಶ್ರೀನಿವಾಸ ಶೆಟ್ಟಿ, ಸ್ವಾಮಿ ವಿವೇಕಾನಂದರ ಸಂದೇಶ ನೀಡಿದರು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮಂಡ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆಯ ಅಧ್ಯಕ್ಷೆ ರಜನಿ ರಾಜ್, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಸ್ಥೆಯ ಟ್ರಸ್ಟಿಗಳಾದ ಸುಚೇತ ಶೆಟ್ಟಿ, ಡಾ.ಎಸ್. ಶ್ರೀನಿವಾಸ ಶೆಟ್ಟಿ, ಅನಿತಾ ಎಸ್. ಶೆಟ್ಟಿ, ಚಂದ್ರಶೇಖರ ನಾಯಕ್ ಕೊಕ್ಕರ್ಣೆ, ಲೋಕಯ್ಯ ಪೂಜಾರಿ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಸಂಚಾಲಕ ಸೀತಾರಾಮ ಶೆಟ್ಟಿ ಎಳತ್ತೂರು ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು. ಬಳಿಕ ಕಿನ್ನಿಗೋಳಿಯ ವಿಜಯ ಕಲಾವಿದರಿಂದ ತೊಟ್ಟಿಲ್ ನಾಟಕ ಪ್ರದರ್ಶನ ನಡೆಯಿತು.