-ದಿಂಡಾವರ ರಸ್ತೆ ಸಂಪೂರ್ಣ ನವೀಕರಣಕ್ಕಾಗಿ ಕಿಸಾನ್ ಸಂಘದ ಪದಾಧಿಕಾರಿಗಳ ಒತ್ತಾಯ
ಕನ್ನಡಪ್ರಭ ವಾರ್ತೆ ಹಿರಿಯೂರು
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ವತಿಯಿಂದ ಬೀದರ್ ಟು ಶ್ರೀರಂಗಪಟ್ಟಣ ರಸ್ತೆ ಕಾಮಗಾರಿಗೆ ಮಣ್ಣು ಸಾಗಿಸಿ ರಸ್ತೆ ಹಾಳಾಗಿದ್ದರ ಬಗ್ಗೆ ಸಚಿವ ಡಿ.ಸುಧಾಕರ್ ಅವರು ರಸ್ತೆ ಸರಿಪಡಿಸಲು ಆಗ್ರಹಿಸಿರುವುದನ್ನು ಅಭಿನಂದಿಸಲಾಗುತ್ತಿದೆ ಎಂದಿದ್ದಾರೆ.ಈ ಬಗ್ಗೆ ಕಿಸಾನ್ ಸಂಘದ ಪದಾಧಿಕಾರಿಗಳು ಮಾತನಾಡಿ, ಪಿಎನ್ ಸಿ ಕಂಪನಿಯವರು ಮಣ್ಣು ರಸ್ತೆಗೆ ಮಣ್ಣು ಸಾಗಿಸಿ ದಿಂಡಾವರ ರಸ್ತೆಯನ್ನು ಹಾಳುಗೆಡವಿದ್ದು, ಇದೀಗ ರಸ್ತೆ ದುರಸ್ತಿಗೆ ಸಚಿವರು ಆದೇಶಿಸಿದ್ದಾರೆ. ಆ ಪ್ರಕಾರ ಮಣ್ಣು ತೆಗೆಯುವ ಜಾಗದಿಂದ ಹಿರಿಯೂರಿನವರೆಗೆ ಸಂಪೂರ್ಣ ಡಾಂಬರ್ ರಸ್ತೆಯನ್ನು ಮಾಡಿಕೊಡಬೇಕು. ಈ ಬಗ್ಗೆ ಸಚಿವರು ಮತ್ತೊಮ್ಮೆ ಕಂಪನಿಯವರಿಗೆ ತಾಕೀತು ಮಾಡಬೇಕು. ಕೇವಲ ರಸ್ತೆಯ ಗುಂಡಿಗಳಿಗೆ ತೇಪೆ ಹಾಕುವ ಕೆಲಸವಾಗಲಿ ಅಥವಾ ಬರೀ ಮಣ್ಣು ಹಾಕುವ ಕೆಲಸವಾಗಲಿ ಆಗಬಾರದು. ಆ ಭಾಗದ ಬೆಳೆಗಳ ಮೇಲೆ ಧೂಳು ಕೂತು ಆಗಿರುವ ನಷ್ಟಕ್ಕೆ ಪಿಎನ್ ಸಿ ಕಂಪನಿಯು ಪರಿಹಾರ ಕೊಡಬೇಕು. ಇದ್ಯಾವುದೂ ಆಗದೆ ಹೋದರೆ ಭಾರತೀಯ ಕಿಸಾನ್ ಸಂಘವು ಉಗ್ರ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಗಡಾರಿ ಕೃಷ್ಣಪ್ಪ, ಕಾತ್ರಿಕೇನಹಳ್ಳಿ ಮಂಜುನಾಥ್, ದಿಂಡಾವರ ಚಂದ್ರಗಿರಿ, ಕೆಕೆ.ಹಟ್ಟಿ ಜಯಪ್ರಕಾಶ್, ಹುಚ್ಚವ್ವನಹಳ್ಳಿ ಗಿರೀಶ್, ಜಯಣ್ಣ, ತಿಪ್ಪೇಸ್ವಾಮಿ, ಹನುಮಂತಪ್ಪ, ಕುಮಾರಣ್ಣ ಹಾಜರಿದ್ದರು.----
ಫೋಟೊ: ತಾಲೂಕಿನ ದಿಂಡಾವರ ರಸ್ತೆಯನ್ನು ಸಂಪೂರ್ಣ ನವೀಕರಣ ಮಾಡಬೇಕೆಂದು ಕಿಸಾನ್ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.