ಕನ್ನಡಪ್ರಭ ವಾರ್ತೆ ಬೇಲೂರು ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಬೇಲೂರಿನ ಹೃದಯ ಭಾಗದಲ್ಲಿ ಇರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಿರಿದಾಗಿರುವುದರ ಜೊತೆಗೆ ಅಗತ್ಯ ಮೂಲ ಸೌಕರ್ಯಗಳಿಲ್ಲದೇ ಪ್ರಯಾಣಿಕರು ದಿನನಿತ್ಯ ಪರದಾಡುವಂತಾಗಿದೆ.ಕಿರಿದಾದ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ :
ಈ ಹಿಂದೆ ಜನಸಾಂದ್ರತೆಗೆ ತಕ್ಕಂತೆ ಬಸ್ ನಿಲ್ದಾಣವನ್ನು ಮಾಡಲಾಗಿತ್ತು. ಬಸ್ಸು ಹಾಗೂ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾದಂತೆ ನಿಲುಗಡೆ ಸಮಸ್ಯೆ ಹೆಚ್ಚಾಗತೊಡಗಿತು. ಹೊರ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳು ಬಸ್ಸುಗಳು ಒಟ್ಟಿಗೆ ನಿಲ್ದಾಣಕ್ಕೆ ಬಂದಾಗ ಫ್ಲಾಟ್ಫಾರಂನಲ್ಲಿ ಸೂಕ್ತ ಜಾಗವಿಲ್ಲದೆ ಎಲ್ಲೆಂದರಲ್ಲಿ ನಿಲ್ಲುತ್ತವೆ. ಅದರಲ್ಲೂ ಸ್ತ್ರೀ ಶಕ್ತಿ ಯೋಜನೆ ಬಂದಮೇಲೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಚಾಲಕರು ಪೈಪೋಟಿಗೆ ಬಿದ್ದು ಸೂಕ್ತ ಅಂಕಣದಲ್ಲಿ ನಿಲ್ಲಿಸದೇ ಅಡ್ಡಾದಿಡ್ಡಿ ನಿಲುಗಡೆ ಮಾಡುತ್ತಾರೆ, ಪ್ರಯಾಣಿಕರು ತಾವು ಯಾವ ಬಸ್ ಹತ್ತಬೇಕು ಎಂಬ ಗೊಂದಲಕ್ಕೀಡಾಗುತ್ತಾರೆ. ಅದರಲ್ಲೂ ವೃದ್ಧರು, ರೋಗಿಗಳ ಪಾಡಂತೂ ಹೇಳತೀರದಾಗಿದೆ. ಕ್ಯಾಮರಾ ಉಂಟು, ಮಾನಿಟರ್ ಇಲ್ಲ:
ಇಲ್ಲಿನ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಸೇರಿದಂತೆ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮೊದಲೇ ನಿಲ್ದಾಣ ಚಿಕ್ಕದಾಗಿದ್ದು ನೂಕುನುಗ್ಗಲಿನ ಸಂದರ್ಭದಲ್ಲಿ ಪಿಕ್ ಪ್ಯಾಕೆಟ್, ಸರಗಳ್ಳತನ, ಗಲಾಟೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗಂತೂ ನಾಲ್ಕೈದು ಬಾರಿ ಸರ ಹಾಗೂ ಮೊಬೈಲ್ ಕಳ್ಳತನ ನಡೆದಿದೆ. ಆದರೆ ಕಳ್ಳರನ್ನು ಪತ್ತೆಹಚ್ಚಲು ಪ್ರಕರಣ ಹೇಗಾಯಿತು ಎಂದು ಪರಿಶೀಲಿಸಲು ಸಿಸಿ ಕ್ಯಾಮೆರಾ ಇದ್ದರೂ ವೀಕ್ಷಿಸಲು ಟಿ.ಸಿ ಕಚೇರಿಯಲ್ಲಿ ಮಾನಿಟರ್ ಇಲ್ಲ. ಕಳೆದ ಐದಾರು ತಿಂಗಳ ಹಿಂದೆ ಮಾನಿಟರ್ ಕೆಟ್ಟು ಹೋಗಿದ್ದು ಹೊಸದನ್ನು ಅಳವಡಿಸಲು ಸಾರಿಗೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ವಿಸ್ತೀರ್ಣಕ್ಕೆ ಮಾಜಿ ಶಾಸಕ ರುದ್ರೇಶ್ ಗೌಡರ ಪ್ರಯತ್ನ :ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಪ್ರವಾಸಿ ಮಂದಿರದ ಕಾಂಪೌಂಡ್ ಒಡೆದು ವಿಸ್ತೀರ್ಣ ಮಾಡಲು ಈ ಹಿಂದೆ ಸತತ ಎರಡು ಬಾರಿ ಆಯ್ಕೆಯಾಗಿ ಶಾಸಕರಾಗಿದ್ದ ದಿ . ವೈ . ಎನ್ ರುದ್ರೇಶ್ ಗೌಡರು ಮುಂದಾಗಿದ್ದರು. ಬಸ್ ನಿಲ್ದಾಣವನ್ನು ವಿಸ್ತರಿಸಲು ಹಾಗೂ ಪ್ರವಾಸಿ ಮಂದಿರವನ್ನು ಬೇರೆಡೆ ಸ್ಥಳಾಂತರಿಸಲು ತಮ್ಮ ಅನಾರೋಗ್ಯದ ನಡುವೆಯೂ ಸಾಕಷ್ಟು ಶ್ರಮ ಪಟ್ಟಿದ್ದರು. ಕೊನೆ ಪಕ್ಷ ಹಳೆಯ ಪ್ರವಾಸಿ ಮಂದಿರದವರೆಗೆ ಜಾಗವನ್ನು ವಿಸ್ತರಿಸಲು ಪಿಡಬ್ಲ್ಯೂಡಿ ಸಚಿವರಲ್ಲಿ ಮನವಿ ಮಾಡಿ ಅನುಮತಿಯನ್ನು ಪಡೆದಿದ್ದರು. ಆದರೆ ಅವರ ಅಕಾಲಿಕ ಮರಣದ ನಂತರ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.ಬಸ್ ನಿಲ್ದಾಣ ಅಗಲೀಕರಣಕ್ಕೆ ಒತ್ತಡ