ಉತ್ತಮ ಆರೋಗ್ಯ ವೃದ್ಧಿಗೆ ಪೌಷ್ಟಿಕ ಕೈ ತೋಟ ಬೆಳೆಸಿ

KannadaprabhaNewsNetwork |  
Published : Feb 24, 2024, 02:33 AM IST
33 | Kannada Prabha

ಸಾರಾಂಶ

ಹಿಂದಿನ ದಿನಗಳಲ್ಲಿ ರೈತರು ಬಹುತೇಕ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದರು. ತಮ್ಮ ಮನೆಯ ಹಿತ್ತಲಿನಲ್ಲಿ ತರಕಾರಿ ಬೆಳೆಯುವುದು ತೀರಾ ಸಾಮಾನ್ಯವಾಗಿತ್ತು. ಇಂದು ಹಲವು ಕಾರಣ ಬದಲಾವಣೆಗಳಿಂದ ಕೈತೋಟಗಳು ಮಾಯವಾಗಿದೆ. ಸಕಲವನ್ನು ಮಾರುಕಟ್ಟೆಯಿಂದ ಕೊಂಡು ತಂದು ಆರೋಗ್ಯದ ಜೊತೆಗೆ ಹಣವನ್ನೂ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ವೃದ್ಧಿಗಾಗಿ ಪೌಷ್ಟಿಕ ಕೈತೋಟವನ್ನು ಬೆಳೆಸುವುದು ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ತರಕಾರಿ, ಸೊಪ್ಪು ಹಾಗೂ ಹಣ್ಣುಗಳಲ್ಲಿ ಪ್ರಮುಖವಾಗಿ ಎಲ್ಲಾ ಪೌಷ್ಟಿಕಾಂಶಗಳು ದೊರೆಯುವುದರಿಂದ ಗೃಹಿಣಿಯರು ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಪಡೆಯಲು ಮನೆಯ ಆವರಣದಲ್ಲೇ ಪೌಷ್ಟಿಕ ಕೈತೋಟವನ್ನು (ಕಿಚನ್‌ ಗಾರ್ಡನ್) ಬೆಳೆಸಿ, ಮನೆಗೆ ಅಗತ್ಯವಾಗಿರುವ ತರಕಾರಿ, ಸೊಪ್ಪುಗಳನ್ನು ಪಡೆಯಬಹುದಾಗಿದೆ.

ಹೌದು, ಹಿಂದಿನ ದಿನಗಳಲ್ಲಿ ರೈತರು ಬಹುತೇಕ ಸ್ವಾವಲಂಬನೆಯ ಜೀವನ ನಡೆಸುತ್ತಿದ್ದರು. ತಮ್ಮ ಮನೆಯ ಹಿತ್ತಲಿನಲ್ಲಿ ತರಕಾರಿ ಬೆಳೆಯುವುದು ತೀರಾ ಸಾಮಾನ್ಯವಾಗಿತ್ತು. ಇಂದು ಹಲವು ಕಾರಣ ಬದಲಾವಣೆಗಳಿಂದ ಕೈತೋಟಗಳು ಮಾಯವಾಗಿದೆ. ಸಕಲವನ್ನು ಮಾರುಕಟ್ಟೆಯಿಂದ ಕೊಂಡು ತಂದು ಆರೋಗ್ಯದ ಜೊತೆಗೆ ಹಣವನ್ನೂ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ವೃದ್ಧಿಗಾಗಿ ಪೌಷ್ಟಿಕ ಕೈತೋಟವನ್ನು ಬೆಳೆಸುವುದು ಅಗತ್ಯವಿದೆ.

ಆರೋಗಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ. ಪೌಷ್ಟಿಕ ಆಹಾರ ಸೇವನೆಯು ದೈನಂದಿನ ಚಟುವಟಿಕೆಗಳಿಗೆ ಸಮರ್ಪಕ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕಾಂಶ ಇರುವ ಆಹಾರದಲ್ಲಿ ಸಮರ್ಪಕ ಪ್ರಮಾಣದಲ್ಲಿ ಜೀವಸತ್ವಗಳು, ಪ್ರೋಟೀನ್‌ ಗಳು, ಶರ್ಕರಪಿಷ್ಠಗಳು ಹಾಗೂ ಖನಿಜಾಂಶಗಳು ಇರಬೇಕು. ಇವುಗಳ ಪರಿಪೂರ್ಣ ದೊರೆಕುವಿಕೆಯು ಮನುಷ್ಯನ ದೇಹದ ಬೆಳವಣಿಗೆ ಹಾಗೂ ಕಾರ್ಯ ಚಟುವಟಿಕೆಗಳ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ. ಅಲ್ಲದೆ, ಇವುಗಳ ಕೊರತೆ ಕೂಡ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ.

ತರಕಾರಿ ಹಾಗೂ ಹಣ್ಣುಗಳಲ್ಲಿ ಪ್ರಮುಖವಾಗಿ ಈ ಎಲ್ಲಾ ಅಂಶಗಳು ದೊರೆಯುವುದರಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಾರ ದಿನ ನಿತ್ಯ ಆಹಾರ ಸೇವನೆಯಲ್ಲಿ ಸರಾಸರಿ 300 ಗ್ರಾಂ ತರಕಾರಿ ಮತ್ತು 100 ಗ್ರಾಂ ಹಣ್ಣು ಪ್ರತಿ ಮನುಷ್ಯನಿಗೆ ಪ್ರತಿ ದಿನಕ್ಕೆ ಬೇಕಾಗುತ್ತದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಇದು ಒಂದು ವಾರಕ್ಕೆ ದೊರಕುವ ಪೌಷ್ಟಿಕತೆಯ ಪ್ರಮಾಣವಾಗಿದೆ. ಈ ನಿಟ್ಟಿನಲ್ಲಿ ಪೌಷ್ಟಿಕ ಕೈತೋಟ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

ಕೈ ತೋಟ ಮಾಡುವುದು ಹೇಗೆ?

ಕೈ ತೋಟ ಮಾಡಲು ತುಂಬಾ ಜಾಗ ಬೇಕಿಲ್ಲ. ಮನೆ ಮುಂದೆ ಅಥವಾ ಬಾಲ್ಕನಿ, ಟೆರೆಸ್‌ ನಲ್ಲಿಯೇ ಪುಟ್ಟದಾದ ತೋಟವನ್ನು ತಯಾರಿಸಬಹುದು. ಸರಾಸರಿ 5- 6 ಸದಸ್ಯರಿರುವ ಕುಟುಂಬಕ್ಕೆ ತರಕಾರಿಗಳನ್ನು ಒದಗಿಸಲು 200- 300 ಚದರ ಮೀಟರ್‌ ಗಳ ವಿಸ್ತೀರ್ಣದ ಸ್ಥಳ ಅವಶ್ಯಕ. ಪ್ರತಿಯೊಬ್ಬರಿಗೂ 50 ಮೀ. ಅಷ್ಟು ಸ್ಥಳದ ಅಗತ್ಯತೆ ಇರುತ್ತದೆ. ಕುಟುಂಬದ ಸದಸ್ಯರ ಸಂಖ್ಯೆಯ ಮೇಲೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈತೋಟಗಳನ್ನಾಗಿ ಯೋಚಿಸಿ ಬೆಳೆಸಬಹುದು.

ತೋಟದ ರಚನೆ ಮಾಡುವಾಗ ತರಕಾರಿ ಬೆಳೆಯ ಪೂರ್ಣ ಬೆಳವಣಿಗೆಗೆ ಅವಶ್ಯಕವಾದ ಸೂರ್ಯನ ಶಾಖ ಸಿಗುವಂತಾಗಲು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ಜಾಗಗಳನ್ನು ತರಕಾರಿ ಮೀಸಲಿಡುವುದು ಉತ್ತಮ.

15- 20 ಅಡಿ ಅಂತರದಲ್ಲಿ ಕಲ್ಲು ಕಂಬಗಳನ್ನು ನೆಟ್ಟು 3- 4 ಸಾಲುಗಳ ಮೇಲೆ ತಂತಿಯನ್ನೆಳೆದು ತೋಟದ ದಾರಿಗಳಿಗೆ ಮತ್ತು ಬದುಗಳಿಗೆ ಕಡಿಮೆ ಸ್ಥಳವನ್ನು ಉಪಯೋಗಿಸಿ ಬೆಳೆಯುವ ಬಹುವಾರ್ಷಿಕ ಗಿಡಗಳ ಮಧ್ಯದ ಜಾಗದಲ್ಲಿ ಕಡಿಮೆ ಅವಧಿ ಬೆಳೆಗಳನ್ನು ಬೆಳೆಯಬಹುದು. ಮನೆಯ ಬಳಕೆಯಲ್ಲಿ ವ್ಯರ್ಥವಾಗುವ ನೀರನ್ನು ಕಾಲುವೆ ಮೂಲಕ ಹರಿಸಿ ಸದುಪಯೋಗ ಪಡೆದುಕೊಳ್ಳಬಹುದು.

ನುಗ್ಗೆ, ತೊಂಡೆ, ಕರಿಬೇವು ಅಂತಹ ಬಹುವಾರ್ಷಿಕ ಸಸ್ಯಗಳು ಕೈತೋಟದ ಒಂದು ಪಕ್ಕದಲ್ಲಿ ಇರಬೇಕು. ಇದರಿಂದ ಬೇರೆ ಬೆಳೆಗಳಿಗೆ ನೆರಳಾಗುವುದಿಲ್ಲ ಮತ್ತು ಪ್ರತಿ ವರ್ಷವೂ ತರಕಾರಿಗಳನ್ನು ಕೊಡುತ್ತಿರುತ್ತದೆ. ಮುಂಗಾರು ಮತ್ತು ಬೇಸಿಗೆಯಲ್ಲಿ ಬೇಲಿಯ ಮೂರು ಕಡೆಯಲ್ಲಿಯೂ ಕುಂಬಳ ಜಾತಿ ಬಳ್ಳಿಗಳನ್ನು ಹಬ್ಬಿಸಬಹುದು.

ಬದುಗಳನ್ನು ಗೆಡ್ಡೆ ತರಕಾರಿಗಳ ಬೇಸಾಯಕ್ಕೆ ಉಪಯೋಗಿಸಿ. ಯಾವ ಬೆಳೆಗಳನ್ನು ಯಾವ ಕಾಲದಲ್ಲಿ ಹಾಕಬೇಕು ಎನ್ನುವುದನ್ನು ನಿರ್ಧರಿಸಿ ಬೆಳೆಯಬೇಕು. ಒಂದೆರೆಡು ಕಾಂಪೋಸ್ಟ್ ಗುಂಡಿಗಳನ್ನು ತೋಟದಲ್ಲಿ ನೆರಳಿರುವ ಕಡೆ ತೋಡಿಸಿ ತೋಟದ ಹಾಗೂ ಮನೆಯ ತ್ಯಾಜ್ಯ ವ್ಯರ್ಥ ವಸ್ತುಗಳನ್ನೆಲ್ಲಾ ಸಂಗ್ರಹಿಸಿ ಸಸಿ ಮಡಿಗೆ ಹಾಗೂ ತೋಟಕ್ಕೆ ಬೇಕಾದ ಕಾಂಪೋಸ್ಟ್ ತಯಾರಿಸಿಕೊಳ್ಳಬೇಕು. ಹೀಗೆ ತಯಾರಿಸಿದ ಗೊಬ್ಬರವನ್ನು ಪ್ರತಿ 100 ಚ. ಅಡಿಗೆ 100 ಕೆ.ಜಿ. ಯಂತೆ ಸೇರಿಸಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎನ್ನುತ್ತಾರೆ ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್‌ ದಾಸ್.

----

ಕೋಟ್...

ಫೋಟೋ- 23ಎಂವೈಎಸ್45

----

ಸುಲಭವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಿ ಬೇಕಾದ ಸಮಯದಲ್ಲಿ ಕೋಯ್ಲು ಮಾಡಿ ಬಳಸಬಹುದು. ಪೌಷ್ಟಿಕಾಂಶದ ಕೊರತೆ ನಿವಾರಣೆಯಾಗಿ ಆರೋಗ್ಯ ವೃದ್ದಿಯಾಗುತ್ತದೆ. ಮನೆಯ ಸುತ್ತಲಿನ ವಾತಾವರಣ ಹಸನಾಗಿಡಲು ಮತ್ತು ಮನೆಯ ಆರ್ಥಿಕ ಮಟ್ಟತಕ್ಕ ಮಟ್ಟಿಗೆ ಸುಧಾರಿಸಲು ಸಹಾಯಕವಾಗಿದೆ. ಪೌಷ್ಟಿಕ ಕೈತೋಟ ನಮ್ಮೆಲ್ಲರ ಮನೆಯಂಗಳದ ಅವಿಭಾಜ್ಯ ಅಂಗವಾಗಿಸಲು ಧೃಡ ಸಂಕಲ್ಪ ಮಾಡಬೇಕು. ಮನೆಯವರೆಲ್ಲರಿಗೂ ತರಕಾರಿ ಬೆಳೆಯುವ ಕೆಲಸದಲ್ಲಿ ತೊಡಗಲು ಅವಕಾಶ ದೊರೆಯುತ್ತದೆ ಮತ್ತು ವಿರಾಮ ವೇಳೆಯನ್ನು ಸುಲಭವಾಗಿ ಕಳೆಯಬಹುದು.

- ರಾಹುಲ್‌ ದಾಸ್, ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ, ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ, ಮೈಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!