ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ದಫ್ ಮುಟ್ಟ್ ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆ ಈ ತಂಡ ರಚಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧೀನದಲ್ಲಿ ‘ಕೆ.ಎಂ.ಎ. ದಫ್ ಮುಟ್ಟ್ (ರಾತೀಬ್)’ ತಂಡವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ‘ದಫ್ ಮುಟ್ಟ್’ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ಈ ತಂಡ ರಚಿಸಲಾಗಿದೆ.ಹೊಸದಾಗಿ ರಚನೆಯಾದ ಈ ತಂಡ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ದಫ್ ಮುಟ್ಟ್ ಪ್ರದರ್ಶನವನ್ನು ಪ್ರಸ್ತುತಪಡಿಸಿತು. ಈ ಮೂಲಕ ಕೊಡವ ಮುಸ್ಲಿಮರ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಬೆಂಗಳೂರು ದೂರದರ್ಶನ ಚಂದನ ವಾಹಿನಿ ದಾಖಲೀಕರಣಗೊಳಿಸಿತು. ಕೆಎಂಎ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ತಂಡ ದೂರದರ್ಶನದ ಸ್ಟುಡಿಯೋದಲ್ಲಿ ಈ ಕಲೆಯನ್ನು ಪ್ರದರ್ಶಿಸಿತು.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಕೆಎಂಎ ಸ್ತಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ, ದಫ್ ಮುಟ್ಟ್ ಕಲಾ ಪ್ರಾಕಾರವು ಸಾಂಪ್ರದಾಯಿಕತೆ, ಧಾರ್ಮಿಕತೆ ಮತ್ತು ಜನಪದೀಯ ಸತ್ವ ಹೊಂದಿರುವ ವಿಶೇಷವಾದ ಪಾಲನೆಯಾಗಿದೆ ಎಂದಿದ್ದಾರೆ.
ದಫ್ ತಂಡದ ಖಲ್ಫರಾದ (ತಂಡದ ನಾಯಕ) ಕೂತಂಬಟ್ಟೀರ ಹುಸೈನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸಿದ ತಂಡದಲ್ಲಿ ಕೋಳುಮಂಡ ರಫೀಕ್, ದುದ್ದಿಯಂಡ ಸಿರಾಜುದ್ದೀನ್, ಕೂತಂಬಟ್ಟೀರ ಸಾದಲಿ, ಪುಡಿಯಂಡ ಇಸ್ಮಾಯಿಲ್, ತುತ್ತಿಯಂಡ ಬಾರಿಕೆ ಹಸೀನಾರ್, ಕೂತಂಬಟ್ಟೀರ ರಶೀದ್, ಪುಡಿಯಂಡ ಅನೀಶ್, ಕೂತಂಬಟ್ಟೀರ ಸಮೀರ್, ಕೋಳುಮಂಡ ಮೊಹ್ಸೀನ್ ಮತ್ತು ಕನ್ನಡಿಯಂಡ ಶರ್ಮಿದ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.