ಕೋವಿಡ್‌ ಸಾಂಕ್ರಾಮಿಕ ಎದುರಿಸಲು ಕೆಎಂಸಿಆರ್‌ಐ ಸನ್ನದ್ಧ: ಸಚಿವ ಲಾಡ್

KannadaprabhaNewsNetwork |  
Published : May 29, 2025, 01:37 AM ISTUpdated : May 29, 2025, 01:38 AM IST
28ಎಚ್‌ಯುಬಿ21ಕೆಎಂಸಿಆರ್‌ಐನಲ್ಲಿ ಆರಂಭಿಸಿರುವ ಕೋವಿಡ್‌ ವಿಶೇಷ ಚಿಕಿತ್ಸಾ ಘಟಕಕ್ಕೆ ಸಚಿವ ಸಂತೋಷ ಲಾಡ್‌, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಈವರೆಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆಸ್ಪತ್ರೆಗಳಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ದಾಖಲಾಗಿರುವವರ ಮೇಲೆ ನಿಗಾ ವಹಿಸಲಾಗಿದೆ. ಕೋವಿಡ್‌ ಟೆಸ್ಟಿಂಗ್‌ ಪರಿಕರಗಳು ಇನ್ನೂ ಬರಬೇಕಿದ್ದು, ವಾರಾಂತ್ಯದಲ್ಲಿ ಆಸ್ಪತ್ರೆಗೆ ಬರುವ ಸಾಧ್ಯತೆ ಇದೆ. ಟೆಸ್ಟಿಂಗ್‌ ಕಿಟ್‌ಗಳು ಬಂದ ನಂತರ ರ್‍ಯಾಂಡಮ್‌ ಟೆಸ್ಟ್‌ ಮಾಡಲಾಗುವುದು.

ಹುಬ್ಬಳ್ಳಿ: ಕೋವಿಡ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತದಿಂದ ಕೆಎಂಸಿಆರ್‌ಐನಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದು, ಯಾವುದೇ ಸ್ಥಿತಿ ಎದುರಾದರೂ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು. ಈವರೆಗೂ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಎಂಸಿಆರ್‌ಐನಲ್ಲಿ ಬುಧವಾರ ಕೋವಿಡ್ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ನಡೆದ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಕೋವಿಡ್‌ ಹಾವಳಿ ವೇಳೆ ಕೆಎಂಸಿಆರ್‌ಐನಲ್ಲಿ ಕಲ್ಪಿಸಿರುವ ಎಲ್ಲ ಸೌಲಭ್ಯಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಜ್ಜುಗೊಳಿಸಲಾಗಿದೆ. ಔಷಧಿ, ಆಕ್ಸಿಜನ್‌, ವೆಂಟಿಲೇಟರ್‌ಗಳ ಸಂಗ್ರಹವಿದ್ದು, ಸಮಸ್ಯೆ ಏನಿಲ್ಲ ಎಂದರು.

ಈವರೆಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆಸ್ಪತ್ರೆಗಳಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ದಾಖಲಾಗಿರುವವರ ಮೇಲೆ ನಿಗಾ ವಹಿಸಲಾಗಿದೆ. ಕೋವಿಡ್‌ ಟೆಸ್ಟಿಂಗ್‌ ಪರಿಕರಗಳು ಇನ್ನೂ ಬರಬೇಕಿದ್ದು, ವಾರಾಂತ್ಯದಲ್ಲಿ ಆಸ್ಪತ್ರೆಗೆ ಬರುವ ಸಾಧ್ಯತೆ ಇದೆ. ಟೆಸ್ಟಿಂಗ್‌ ಕಿಟ್‌ಗಳು ಬಂದ ನಂತರ ರ್‍ಯಾಂಡಮ್‌ ಟೆಸ್ಟ್‌ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ವೈದ್ಯರಿಂದ ಔಷಧಿ ಸಂಗ್ರಹಣೆ ಕುರಿತ ಮಾಹಿತಿ ಪಡೆದ ಸಚಿವರು, ಅವಧಿ ಮೀರಿದ ಮತ್ತು ಮುಗಿಯುವ ಹಂತದಲ್ಲಿರುವುದನ್ನು ಪರಿಶೀಲಿಸುವಂತೆ ಸೂಚಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಎಲ್ಲ ಸೌಲಭ್ಯಗಳಿವೆ. ಕೋವಿಡ್‌ ತೀವ್ರತೆ ಮೊದಲಿನಂತಿಲ್ಲ. ಹೀಗಾಗಿ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಈ ವೇಳೆ ಕೋವಿಡ್‌ ಕುರಿತಂತೆ ಆಸ್ಪತ್ರೆ ಕೈಗೊಂಡ ಸಿದ್ಧತೆ ಕುರಿತಂತೆ ಡಾ. ರಾಜಶೇಖರ್ ದ್ಯಾಬೇರಿ ಮಾಹಿತಿ ನೀಡಿ, ಕೋವಿಡ್‌ ರೋಗಿಗಳಿಗೆಂದೇ 40 ಬೆಡ್‌ ವ್ಯವಸ್ಥೆ ಮಾಡಲಾಗಿದೆ. 25 ವೆಂಟಿಲೇಟರ್‌ ಬೆಡ್ ಸಿದ್ಧವಾಗಿವೆ. ಆಕ್ಸಿಜನ್ ಮತ್ತು ಆರ್‌ಟಿಪಿಸಿಆರ್‌ ಟೆಸ್ಟಿಂಗ್‌ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟೆಸ್ಟಿಂಗ್‌ ಕಿಟ್‌ ಬರಬೇಕಿದ್ದು, ಬಂದ ತಕ್ಷಣವೇ ಟೆಸ್ಟಿಂಗ್‌ ಆರಂಭಿಸಲಾಗುವುದು. ಚಿಕಿತ್ಸೆ ಕುರಿತಂತೆ ಸರ್ಕಾರದ ಮಾರ್ಗಸೂಚಿ ದೊರೆತಿದ್ದು, ಆರಂಭಿಕ ಲಕ್ಷಣಗಳು ಕಂಡು ಬಂದರೆ ಮನೆಯಲ್ಲೇ ಚಿಕಿತ್ಸೆ ಮತ್ತು ತೀವ್ರವಾದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅದರಂತೆ ವಿವಿಧ ವೈದ್ಯರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ನಂತರ ನಡೆದ ಸಭೆಯಲ್ಲಿ ತಾಯಿ ಮರಣ ಪ್ರಮಾಣ ಕುರಿತಂತೆ ಡಾ. ಹೇಮಲತಾ ಅವರು ತಾಯಿ ಮರಣದ ಬಗ್ಗೆ ಮಾಹಿತಿ ನೀಡಿದರು. ಅದಕ್ಕೆ ಸಚಿವರು, ಜಿಲ್ಲೆಯಲ್ಲಿ ತಾಯಿ ಮರಣದ ಪ್ರಮಾಣದ ಹೆಚ್ಚಾಗುತ್ತಿದೆ. ಅದಕ್ಕೆ ಶೀಘ್ರದಲ್ಲೇ ತಾಂತ್ರಿಕವಾಗಿ ಎಷ್ಟು ಪ್ರಮಾಣವಿದೆ. ಅದನ್ನು ತಡೆಗಟ್ಟುವ ಬಗೆ ಹೇಗೆ ಎಂಬುದರ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸೂಚಿಸಿದರು. ಗರ್ಭೀಣಿಯರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಆದರೂ ಮರಣ ಪ್ರಮಾಣ ಹೆಚ್ಚಾಗಲು ಕಾರಣವೇನು ಎಂಬುದು ವರದಿಯಲ್ಲಿ ಇರಲಿ ಎಂದರು.

ಸಿಜಿರಿನ್‌ ಹೆರಿಗೆ ಕಡಿಮೆ ಮಾಡಲು ವೈದ್ಯರು ಶ್ರಮಿಸಬೇಕು ಎಂದು ಸಲಹೆ ನೀಡಿದ ಅವರು, ಈ ಸಂಬಂಧ ಜಾಗೃತಿ ಕೈಗೊಳ್ಳುವಂತೆ ಸೂಚಿಸಿದರು.

ವಾರ್ಡ್‌ಗಳಿಗೆ ಸಚಿವರ ಭೇಟಿ: ಮೊದಲು ಕೋವಿಡ್‌ ಚಿಕಿತ್ಸೆಗಾಗಿ ತೆರೆದಿರುವ ವಿಶೇಷ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿನ ಪರಿಕರ, ಬೆಡ್‌ ಕುರಿತಂತೆ ಸಮಗ್ರ ಮಾಹಿತಿ ಪಡೆದರು. ಬಳಿಕ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆ, ಸ್ವಚ್ಛತೆ ಕುರಿತಂತೆ ಮಾಹಿತಿ ಪಡೆದರು. ಈ ವೇಳೆ ಕೆಲವರು ತಮ್ಮ ಸಮಸ್ಯೆಗಳನ್ನು ಸಚಿವರ ಬಳಿ ಹೇಳಿಕೊಂಡರು. ಆಸ್ಪತ್ರೆಯ ಸ್ವಚ್ಛತೆಗೆ ಗಮನಹರಿಸುವಂತೆ ಸೂಚಿಸಿದರು.

ಮನವಿ ಸಲ್ಲಿಕೆ: ಕೆಎಂಸಿಆರ್‌ಐಗೆ ಭೇಟಿ ನೀಡಿದ್ದ ಸಚಿವರಿಗೆ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಆವರಣದ ಮಳಿಗೆ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಸಚಿವರ ಎದುರು ದೂರಿದರು. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಡಿ ಗ್ರುಪ್‌ ನೌಕರರು ತಮ್ಮ ವೇತನ ಸಮಸ್ಯೆ ಬಗೆಹರಿಸುವಂತೆಯೂ ಸಚಿವರಿಗೆ ಮನವಿ ಮಾಡಿದರು.

ಈ ವೇಳೆ ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ್, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹಿರಿಯ-ಕಿರಿಯ ವೈದ್ಯರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ