ಯಕ್ಷಗಾನ ಕಲೆಯಿಂದ ಜ್ಞಾನ, ಆರೋಗ್ಯ, ಸಂಸ್ಕೃತಿ ಬೆಳೆಯುತ್ತದೆ: ಡಾ. ತಲ್ಲೂರು

KannadaprabhaNewsNetwork | Published : Aug 6, 2024 12:34 AM

ಸಾರಾಂಶ

ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಅಂಗವಾಗಿ ಶ್ರೀ ರಂಗನಾಥ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದೊಂದಿಗೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರ ಇದರ 3ನೇ ವರ್ಷದ ಶಾಲಾ ಮಕ್ಕಳ ಯಕ್ಷಗಾನ ಹೆಜ್ಜೆ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಯಕ್ಷಗಾನ ಕಲೆ ಅದ್ಭುತವಾದ ಕಲೆ. ಯಕ್ಷಗಾನ ಕಲೆಯಿಂದ ಜ್ಞಾನ, ಆರೋಗ್ಯ, ಆಯುಷ್ಯ, ಸಂಸ್ಕಾರ, ಸಂಸ್ಕೃತಿ ಬೆಳೆಯುತ್ತದೆ. ಪುರಾಣಗಳ ಪ್ರಸಂಗದಿಂದ ಮನಸ್ಸು ವಿಕಾಸವಾಗುತ್ತದೆ. ಯಕ್ಷಗಾನ ಕಲೆ ಕಲಿತ ಮಕ್ಕಳಲ್ಲಿ ಜ್ಞಾನದ ಜೊತೆಗೆ ಶಿಕ್ಷಣವೂ ವೃದ್ಧಿಯಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಅಂಗವಾಗಿ ಭಾನುವಾರ ಇಲ್ಲಿನ ಶ್ರೀ ರಂಗನಾಥ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದೊಂದಿಗೆ ಯಕ್ಷ ನುಡಿಸಿರಿ ಬಳಗ ಸಿದ್ದಾಪುರ ಇದರ 3ನೇ ವರ್ಷದ ಶಾಲಾ ಮಕ್ಕಳ ಯಕ್ಷಗಾನ ಹೆಜ್ಜೆ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಎಸ್. ಸಚ್ಚಿದಾನಂದ ಚಾತ್ರ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿ ಕುಂದಾಪುರ ಆದರ್ಶ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆದರ್ಶ ಹೆಬ್ಬಾರ್ ಮಾತನಾಡಿದರು. ಅತಿಥಿಗಳಾಗಿ ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣ ಪೂಜಾರಿ, ಯಕ್ಷಗುರು ಮಂಜುನಾಥ ಕುಲಾಲ ಐರೋಡಿ, ಶ್ರೀ ರಂಗನಾಥ ಸಭಾಭವನದ ಮಾಲಕ ಮಧುಸೂದನ ಕಾಮತ್‌ ಉಪಸ್ಥಿತರಿದ್ದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷ ನುಡಿಸಿರಿ ಸಿದ್ದಾಪುರ ಬಳಗದ ಅಧ್ಯಕ್ಷ ಡಾ.ಜಗದೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರೋತ್ಸಾಹಕರಾದ ಮಧುಸೂದನ್ ಕಾಮತ್ ಪುತ್ರ ಸಿ.ಎ. ಪದವಿಯಲ್ಲಿ ಉತ್ತೀರ್ಣರಾದ ಡಿ. ಅಭಿಷೇಕ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪ್ರ ಕನ್ನಡದಲ್ಲಿ ಹೊಯ್ ಕೈ ಯಕ್ಷಗಾನ ತಾಳಮದ್ದಲೆ ಜರುಗಿತು.ನಿವೃತ್ತ ಉಪನ್ಯಾಸಕ ಶ್ರೀಕಾಂತ್ ರಾವ್ ಸಿದ್ದಾಪುರ ಸ್ವಾಗತಿಸಿದರು. ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮುಸ್ತಕ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ. ಭೋಜ ಶೆಟ್ಟಿ ವಂದಿಸಿದರು.

Share this article