ಕೆಎನ್ಆರ್ ವಜಾ: ತುಮಕೂರಿನಲ್ಲಿ ಭುಗಿಲೆದ್ದ ಆಕ್ರೋಶ

KannadaprabhaNewsNetwork |  
Published : Aug 14, 2025, 01:00 AM IST
ಕ್ಯಾಪ್ಶನ್.........ತುಮಕೂರಿನಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಬರುತ್ತಿರುವ ಕೆ.ಎನ್. ರಾಜಣ್ಣ ಅಭಿಮಾನಿಗಳು | Kannada Prabha

ಸಾರಾಂಶ

ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಕ್ರಮ ಖಂಡಿಸಿ ತುಮಕೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಕ್ರಮ ಖಂಡಿಸಿ ತುಮಕೂರಿನಲ್ಲಿ ಆಕ್ರೋಶ ಭುಗಿಲೆದಿದ್ದು, ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕೆ.ಎನ್.ಆರ್. ಅಭಿಮಾನಿಗಳು, ವಾಲ್ಮೀಕಿ ಸಮುದಾಯದವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ತುಮಕೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಟೌನ್‌ಹಾಲ್ ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಕೆಎನ್‌ಆರ್ ಅಭಿಮಾನಿಗಳು, ಮಧುಗಿರಿ ಕ್ಷೇತ್ರದ ಕಾರ್ಯಕರ್ತರು ಕೆಎನ್‌ಆರ್ ಪರ ಘೋಷಣೆಗಳನ್ನು ಕೂಗುತ್ತಾ ಬಿ.ಎಚ್. ರಸ್ತೆ ಮುಖೇನ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೆ.ಎನ್.ಆರ್, ಆರ್.ಆರ್. ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ನಗರದ ಟೌನ್‌ಹಾಲ್ ವೃತ್ತ ಜಮಾಯಿಸಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯಾವುದೇ ತಪ್ಪು ಮಾಡದ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾ ಮಾಡಿ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಈ ವೇಳೆ ಮಾತನಾಡಿದ ಮುಖಂಡ ಗಂಗಣ್ಣ ಮಾತನಾಡಿ, ಕೆ.ಎನ್. ರಾಜಣ್ಣ ಅವರು ಸಂಪುಟದಿಂದ ವಜಾ ಮಾಡಿರುವುದು ತುಮಕೂರು ಜಿಲ್ಲೆಯ ಅಹಿಂದ ವರ್ಗದವರಿಗೆ ತುಂಬಾ ನೋವಾಗಿದೆ. ಮತ್ತೆ ರಾಜಣ್ಣನವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಈ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ರಾಜಣ್ಣನವರನ್ನು ವಜಾ ಮಾಡಿರುವುದನ್ನು ವಾಪಸ್ ಪಡೆದು ಮತ್ತೆ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.

1968 ರಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು, ಅಸಹಾಯಕರಿಗೆ ಸಹಾಯ ಮಾಡುತ್ತಾ ಜನಪರ ನಾಯಕರಾಗಿ ಬೆಳೆದ ಕೆ.ಎನ್.ರಾಜಣ್ಣನವರನ್ನು ತುಮಕೂರು ಜಿಲ್ಲೆಯ ದೇವರಾಜ ಅರಸು ಎಂದು ಜನ ಗುರುತಿಸಿ ಗೌರವಿಸುತ್ತಾರೆ. ಸರ್ಕಾರದ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಂತಹ ನಾಯಕನನ್ನು ಸಚಿವ ಸ್ಥಾನದಿಂದ ತೆಗೆದು ಅವಮಾನ ಮಾಡಿರುವುದು ಜಿಲ್ಲೆಯ ಅವರ ಅಭಿಮಾನಿಗಳಿಗೆ ನೋವಾಗಿದೆ ಎಂದು ಪ್ರತಿಭಟನಾನಿರತರು ಹೇಳಿದರು.ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗಳಿಸಲು ಕೆ.ಎನ್.ಆರ್ ಕೊಡುಗೆ ಇದೆ. 30 ವರ್ಷಗಳಿಂದ ಕಾಂಗ್ರೆಸ್ ಗೆಲುವು ಸಾಧ್ಯವಾಗದ ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆಯಲು ಅಲ್ಲಿನ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರು ಪಕ್ಷ ನಿಷ್ಠೆ ಕಾರ್ಯತಂತ್ರ ಕಾರಣ ಎಂದರು.ಕೆ.ಎನ್.ರಾಜಣ್ಣನವರು 1968ರಿಂದ ಎಲ್ಲಾ ಕಾಂಗ್ರೆಸ್ ನಾಯಕರ ಒಡನಾಡಿಯಾಗಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಶ್ರಮಿಸಿದ್ದಾರೆ. ಅಶಕ್ತರಿಗೆ, ಶೋಷಿತರಿಗೆ ಧ್ವನಿಯಾಗಿ ನಿಂತು ಅವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಜನಾನುರಾಗಿಯಾಗಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ತೆಗೆದಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಂಡು ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಕೆಎನ್‌ಆರ್ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕಲ್ಲಹಳ್ಳಿ ದೇವರಾಜು, ಎಸ್. ನಾಗಣ್ಣ, ಸಿಂಗನಹಳ್ಳಿ ರಾಜ್‌ಕುಮಾರ್, ವೆಂಕಟೇಗೌಡ, ಧನಿಯಕುಮಾರ್, ಪ್ರತಾಪ್ ಮದಕರಿ, ಪುರುಷೋತ್ತಮ್, ಟಿ.ಪಿ. ಮಂಜುನಾಥ್, ಲಕ್ಷ್ಮೀನಾರಾಯಣ್, ಕುಂದೂರು ತಿಮ್ಮಯ್ಯ, ಮಂಜೇಶ್, ಕುಪ್ಪೂರು ಶ್ರೀಧರ್, ಮುರುಳಿ ಕುಂದೂರು, ತಿಮ್ಮಣ್ಣ ಕುಂದೂರು, ಮಂಜುನಾಥ್, ನಾರಾಯಣಗೌಡ, ರಾಯಸಂದ್ರ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.ಕೆಎನ್‌ಆರ್ ಅಭಿಮಾನಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಟೌನ್‌ಹಾಲ್ ಸರ್ಕಲ್, ಬಿ.ಎಚ್. ರಸ್ತೆ, ಎಂ.ಜಿ. ರಸ್ತೆಯ ಬದಿಗಳ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ತೆರವುಗೊಳಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆಗಳಾಗದಂತೆ ಬಿಗಿ ಭದ್ರತೆ ಕೈಗೊಂಡಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ