ಕನ್ನಡಪ್ರಭ ವಾರ್ತೆ ನಾಪೋಕ್ಲು
ದೇಶದಲ್ಲಿ ವಿಶೇಷ ಆಚಾರ ವಿಚಾರ ಪದ್ಧತಿ ಪರಂಪರೆ ಗಳನ್ನು ಹೊಂದಿರುವ ಹೆಮ್ಮೆಯ ಜಿಲ್ಲೆ ನಮ್ಮದು ಎಂದು ಭಾಗಮಂಡಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ ಕೆ ಜೆ. ಹೇಳಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ ಕೋರಂಗಾಲ ಸಹಯೋಗದಲ್ಲಿ ಸೋಮವಾರ ದಿ. ಡಾ. ಇರುವೈಲು ರಘುರಾಮ ಅಸ್ರಣ್ಣ ಮತ್ತು ಶ್ರೀಮತಿ ಲೀಲಾ ಅಸ್ತ್ರಣ್ಣ ದತ್ತಿ ಉಪನ್ಯಾಸ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರನ್ನೂ ಸರಿ ಸಮಾನರಾಗಿ ಕಾಣುವ ಸಮಾಜ ನಮ್ಮ ಜಿಲ್ಲೆಯಲ್ಲಿದೆ. ಕೊಡಗಿನ ನೆಲ ಜಲವನ್ನು ಕವಿ ಪಂಜೆ ಮಂಗೇಶರಾಯರು ದೇವ ಸನ್ನಿಧಿ ಎಂದು ಬಣ್ಣಿಸಿರುತ್ತಾರೆ. ಶುದ್ಧ ಗಾಳಿ ಸ್ವಚ್ಛ ನೆಲ ನಮ್ಮ ಜಿಲ್ಲೆಯಲ್ಲಿದೆ ಎಂದು ಸಮೀಕ್ಷೆ ಹೇಳಿದೆ. ಹುಟ್ಟಿನಿಂದ ಸಾವಿನವರೆಗೆ ನಮ್ಮಲ್ಲಿ ವಿಶಿಷ್ಟ ಪದ್ಧತಿಗಳು ಇದ್ದರೂ ಸಾವು ನೋವಿನಲ್ಲೂ ಸಹಾಯದ ಪದ್ಧತಿ ಇಂದಿಗೂ ನಡೆದು ಬಂದಿರುವುದು ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ವ್ಯವಸ್ಥಾಪಕ ಚೀಯಕಪೂವಂಡ ಮಿಥುನ್ ಚಂಗಪ್ಪ ಅವರು, ಆಂಗ್ಲಭಾಷೆ ವ್ಯಾವಹಾರಿಕ ಭಾಷೆಯಾಗಬೇಕು. ಅನ್ನದ ಭಾಷೆ ಮಣ್ಣಿನ ಭಾಷೆ ಕನ್ನಡಕ್ಕೆ ನಾವು ಆದ್ಯತೆ ನೀಡಬೇಕು ಎಂದರು.
ಕೊಡಗು ಜಿಲ್ಲಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕ ಮಾತನಾಡಿ, ದತ್ತಿ ಕುರಿತು ಮಾಹಿತಿ ನೀಡಿದರು.ಮುಖ್ಯ ಶಿಕ್ಷಕಿ ಶ್ವೇತನ್ ಚಂಗಪ್ಪ ಮಾತನಾಡಿ, ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯದ ಅಸ್ಮಿತೆಯನ್ನು ಇಂದಿನ ಮಕ್ಕಳು ಮುಂದುವರಿಸಿಕೊಂಡು ಹೋಗಬೇಕು .ಆದ್ದರಿಂದ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು ಎಂದರು.
ಹತ್ತನೇ ತರಗತಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅದವಿಯ ಯು. ಅನುಪಸ್ಥಿತಿಯಲ್ಲಿ ಅವರ ಪೋಷಕರಾದ ಶಿಕ್ಷಕಿ ಅಮೀನ ಮತ್ತು ಉಮರ್ ಅವರನ್ನು ಸನ್ಮಾನಿಸಿ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುನಿಲ್ ಪತ್ರಾವೋ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಮುನಿರ್ ಅಹ್ಮದ್, ಗೌರವ ಕೋಶಾಧಿಕಾರಿ ಸಂಪತ್ ಕುಮಾರ್ ಮತ್ತಿತರರು ಭಾಗವಹಿಸಿದರು.
ಮೌಲ್ಯ ಡಿ.ಬಿ., ದೀಕ್ಷಿತಾ ಎಂ.ಆರ್., ಪ್ರಣಿತ ಕೆ.ವಿ. ಇವರಿಂದ ಸ್ವರಚಿತ ಕವನ ವಾಚನ ನಡೆಯಿತು. ವಿದ್ಯಾರ್ಥಿ ಹೇಮಂತ್ ಎನ್ಎಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಇಂದಿರ ಎ.ಕೆ.ಸ್ವಾಗತಿಸಿದರು. ಭಾಗಮಂಡಲ ಹೋಬಳಿ ನಿಕಟಪೂರ್ವ ಅಧ್ಯಕ್ಷ ಶ್ರೀಧರ್ ಎ ಎಸ್ ವಂದಿಸಿದರು.