ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ದೇಶದ ಕ್ರೀಡೆ ಮತ್ತು ಸೈನ್ಯದಲ್ಲಿ ಕೊಡಗಿನವರ ಮತ್ತು ಕೊಡವರ ಹೆಸರು ಇಂದಿಗೂ ಮುಂಚೂಣಿಯಲ್ಲಿದೆ. ಇದಕ್ಕಾಗಿಯೇ ವಿಶ್ವಮಟ್ಟದಲ್ಲಿ ಎಲ್ಲರೂ ನಮ್ಮನ್ನು ಗುರುತಿಸುತ್ತಾರೆ ಎಂದು ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಹೇಳಿದ್ದಾರೆ.ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯಲ್ಲಿರುವ ಸಮಾಜದ ಜಾಗದಲ್ಲಿ ಮಂಗಳವಾರ ಜನಾಂಗ ಬಾಂಧವರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.ದೇಶ ಸೇವೆಯ ಹೆಸರು ಬಂದಾಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಹಾಗೆಯೇ ಕೊಡಗಿನವರಲ್ಲಿ ಕ್ರೀಡೆ ಎಂಬುದು ರಕ್ತಗತವಾಗಿ ಹರಿದು ಬಂದಿದೆ. ಹಾಕಿಯಲ್ಲಿ ಸಾಕಷ್ಟು ಒಲಂಪಿಯನ್ಗಳನ್ನು ನೀಡಿರುವ ಕೊಡಗು ಎಲ್ಲಾ ಕ್ರೀಡೆಗಳಲ್ಲೂ ಗುರುತಿಸಿಕೊಂಡಿದೆ ಎಂದರು.
ಕೊಡವ ಜನಾಂಗದವರೂ ಇತರೆ ಜನಾಂಗದವರವನ್ನೂ ಮತ್ತು ಅವರ ಸಂಸ್ಕೃತಿಯನ್ನು ಗೌರವಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಇತರ ರಾಜ್ಯಗಳಿಗೂ ಕೊಡಗಿನ ಕಾವೇರಿಯ ನೀರನ್ನು ಕೊಡುವ ಈ ಜಿಲ್ಲೆಯಲ್ಲಿ ಹುಟ್ಟಿದ ನಾವು ನಿಜಕ್ಕೂ ಧನ್ಯರು ಎಂದರು.ಕುಶಾಲನಗರ ಐಶ್ವರ್ಯ ಕಾಲೇಜಿನ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ಮಾತನಾಡಿ, ನಾವು ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ಜನಾಂಗದ ಅಭಿವೃದ್ದಿಗೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಇಂದಿನ ಹಲವು ಯುವಕರು ಪಿಯುಸಿ ಅಭ್ಯಾಸದ ನಂತರ ಹಾದಿ ತಪ್ಪುತ್ತಿರುವುದು ದುರಂತ. ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಸಮಯದಲ್ಲಿ ಅನ್ಯ ದಾರಿ ಹಿಡಿಯುತ್ತಿದ್ದಾರೆ. ಜಿಲ್ಲೆಯ ಯುವಕರು ಕೊಡಗನ್ನು ಬಿಡಬಾರದು. ದಯವಿಟ್ಟು ಇಲ್ಲಿಯ ಆಸ್ತಿಯನ್ನು ಯಾರೂ ಮಾರಬಾರದು ಎಂದು ಕಿವಿಮಾತು ಹೇಳಿದರು.
ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಹಿರಿಯರಾದ ಕಲ್ಲೇಂಗಡ ಅಪ್ಪಚ್ಚು, ಉಪನ್ಯಾಸಕಿ ಪುಲಿಯಂಡ ಕಾವೇರಮ್ಮ ಇದ್ದರು.