ಫೆ.25ರಂದು ಕೋಲಿ, ಕಬ್ಬಲಿಗ ಸಮಾಜದ ಸಮಾವೇಶ

KannadaprabhaNewsNetwork |  
Published : Feb 11, 2024, 01:55 AM IST
ಫೆಬ್ರವರಿ 25ರಂದು ಕಲಬುರಗಿಯಲ್ಲಿ ಕೋಲಿ, ಕಬ್ಬಲಿಗ ಸಮಾಜದ  ರಾಜ್ಯ ಮಟ್ಟದ ಅದ್ದೂರಿ ಸಮಾವೇಶಕ್ಕೆ ನಿರ್ಣಯ | Kannada Prabha

ಸಾರಾಂಶ

ಕಲಬುರಗಿ ನಗರದ ಎನ್.ವಿ. ಮೈದಾನದಲ್ಲಿ ಫೆ.25ರಂದು ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜದ ರಾಜ್ಯ ಮಟ್ಟದ ಸಮಾವೇಶವನ್ನು ಅದ್ಧೂರಿಯಾಗಿ ನಡೆಸಲು ಒಮ್ಮತದ ನಿರ್ಧಾರ

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಎನ್.ವಿ. ಮೈದಾನದಲ್ಲಿ ಫೆ.25ರಂದು ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜದ ರಾಜ್ಯ ಮಟ್ಟದ ಸಮಾವೇಶವನ್ನು ಅದ್ಧೂರಿಯಾಗಿ ನಡೆಸಲು ಶುಕ್ರವಾರ ನಗರದ ಐವಾನ್- ಇ ಶಾಹಿ ಅತಿಥಿ ಗೃಹದಲ್ಲಿ ನಡೆದ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಮಾಜದ ಮುಖಂಡ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ಜಿಲ್ಲೆಗಳಿಂದ ಬಂದ ಸಮಾಜದ ಮುಖಂಡರು ಮಾತನಾಡಿ, ನಮ್ಮ ಸಮಾಜ ಎಸ್ಟಿ ಸೇರ್ಪಡೆಗಾಗಿ ಸುಮಾರು 30 ವರ್ಷಗಳಿಂದ ವಿವಿಧ ಮುಖಂಡರು, ರಾಜಕೀಯ ನಾಯಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ ಆದರೆ ನಮ್ಮ ಸಮಾಜ ಇನ್ನೂವರೆಗೂ ಎಸ್ಟಿಗೆ ಸೇರಲೇ ಇಲ್ಲ ಈ ಸಮಾಜ ಎಸ್ಟಿಗೆ ಸೇರಬೇಕಾದರೆ ನಾವು ಹೋರಾಟ ಮಾಡಲೇಬೇಕು ಹೀಗಾಗಿ ಸಮಾವೇಶದ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಿದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮ ಸಮಾಜ ಎಸ್ಟಿ ಪಟ್ಟಿಗೆ ಸೇರಿಸಲು ಯಾವುದೇ ಅನುಮಾನವಿಲ್ಲ ಹೀಗಾಗಿ 25ರಂದು ನಡೆಯುವ ಸಮಾವೇಶವನ್ನು ಅದ್ಧೂರಿಯಾಗಿ ನಡೆಸಬೇಕೆಂದರು.

25ರಂದು ನಡೆಯುವ ಸಮಾವೇಶ ತಿಪ್ಪಣ್ಣಪ್ಪ ಕಮಕನೂರ ಅವರ ಮನೆಯ ಸಮಾವೇಶ ಅಲ್ಲ ಅದು ಸಮಾಜದ ಸಮಾವೇಶ ಆಗಿರುವುದರಿಂದ ಎಲ್ಲರೂ ಭಿನ್ನಾಪ್ರಾಯ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಕೋಲಿ, ಗಂಗಾಮತ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್ ಮಾತನಾಡಿ, ನಮ್ಮ ಸಮಾಜ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿದ್ದು 19 ರಾಜ್ಯಗಳಲ್ಲಿ ನಮ್ಮ ಸಮಾಜ ಎಸ್ಟಿಗೆ ಸೇರ್ಪಡೆಯಾದರೆ ಆರು ರಾಜ್ಯಗಳಲ್ಲಿ ಎಸ್ಸಿಗೆ ಸೇರ್ಪಡೆಯಾಗಿದೆ. ಕಾರಣ ಅಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿರುವುದರಿಂದ ಅದು ಸಾಧ್ಯವಾಗಿದ್ದು, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ನಮ್ಮ ಸಮಾಜದ ಎಲ್ಲಾ ಮುಖಂಡರು ಎಲ್ಲಾ ಭಿನ್ನಾಪ್ರಾಯವನ್ನು ಬಿಟ್ಟು ಒಂದಾಗಿ ಸಮಾವೇಶವನ್ನು ಸಂಘಟಿಸಿದಾಗ ಮಾತ್ರ ಸಮಾಜ ಎಸ್ಟಿಗೆ ಸೇರಲು ಸಾಧ್ಯವೆಂದರು.

ನಮ್ಮ ರಾಜ್ಯದಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಹೊರತುಪಡಿಸಿ ಒಬ್ಬ ಶಾಸಕರು ಇಲ್ಲ. ನಮ್ಮ ಸಮಾಜದ ಮತಗಳಿಂದಲೇ ರಾಜ್ಯದಲ್ಲಿ 40 ಎಮ್ಎಲ್ಎ ಗಳು 3 ಎಂಪಿಗಳು ಆಗಿದ್ದಾರೆ. ಈ ಸಮಾಜದ ಋಣ ತೀರಿಸಬೇಕಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ನಮ್ಮ ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

25ರಂದು ನಡೆಯುವ ನಮ್ಮ ಸಮಾಜದ ಸಮಾವೇಶದ ಜನ ಸಾಗರವನ್ನು ನೋಡಿ ರಾಜ್ಯ ಸರ್ಕಾರ ತಕ್ಷಣವೇ ಎಸ್ ಟಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ರವಾನೆ ಮಾಡಬೇಕು ಮತ್ತು ಕೇಂದ್ರ ಸರ್ಕಾರ ಈ ಸಮಾವೇಶದ ಶಕ್ತಿ ಪ್ರದರ್ಶನ ಗಮನಿಸಿ ಎಸ್ಟಿ ಪ್ರಸ್ತಾವನೆಗೆ ಅನುಮೋದನೆ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮಲ್ಲಿರುವ ಭಿನ್ನಾಭಿಪ್ರಾಯ, ವೈ ಮನಸ್ಸು ಬಿಟ್ಟು ಎಲ್ಲರೂ ಒಗ್ಗೂಡಿ ಸಮಾವೇಶ ಯಶಸ್ವಿಗೆ ಸಹಕರಿಸಬೇಕೆಂದು ಸಲಹೆ ನೀಡಿದರು.

ರಾಷ್ಟ್ರೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪಣ್ಣ ರೆಡ್ಡಿ, ವರಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮಾಜ ಅಧಿಕ್ಕೆ ಸಂಖ್ಯೆ ಇದ್ದು ಈ ಸಮಾಜವನ್ನು ಎಸ್ಟಿಗೆ ಸೇರಿಸಲು ನಿರಂತರವಾಗಿ ಹೋರಾಟ ನಡೆಯುತ್ತಿವೆ. ಈ ಸಮಾಜ ಎಸ್ಟಿಗೆ ಸೇರಿಸುವ ಕಾಲ ಸನ್ನಿಹಿತವಾಗಿದೆ ಎಂದರು.

ಸಾಯಿಬಣ್ಣ ಬೋರ್ ಬಂಡಾ, ಶರಣಪ್ಪ ನಾಟಿಕರ್, ಗುಂಡು ಐನಾಪುರ್, ಬಸವರಾಜ್ ಹರವಾಳ, ರಮೇಶ್ ನಾಟಿಕರ್ ಅವ್ವಣ್ಣಗೌಡ ಪಾಟೀಲ್, ಶ್ರೀಕಾಂತ್ ಅಲೂರ ಸೇರಿದಂತೆ ವಿವಿಧ ತಾಲೂಕುಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ 25 ರಂದು ನಡೆಯುವ ಸಮಾವೇಶ ಯಶಸ್ವಿಗೆ ನಾವೆಲ್ಲರೂ ಸಹಕರಿಸುವುದಾಗಿ ಮತ್ತು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡುವುದಾಗಿ ಒಕ್ಕೂಲಿನಿಂದ ಭರವಸೆ ನೀಡಿದರು.ಸಮಾಜವನ್ನು ಎಸ್ ಟಿಗೆ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದೇ ಫೆ.25ರಂದು ನಡೆಯುವ ಸಮಾವೇಶದ ಉದ್ದೇಶವಾಗಿದೆ. ಮೀನುಗಾರಿಕೆಯಲ್ಲಿ ಸಮಾಜದ ಜನರಿಗೆ ಶೇಕಡ 90 ಮೀಸಲಿಡುವುದು, ಬೆಂಗಳೂರಿನ ವಿಧಾನಸೌಧದ ಎದುರು ನಿಜಶರಣ ಅಂಬಿಗರ ಚೌಡಯ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಕಾಲಮಿತಿ, ಅಂಬಿಗರ ಪೀಠಕ್ಕೆ 500 ಕೋಟಿ ಮೀಸಲಿಡಬೇಕು. ಯಾನಗುಂದಿ ದೇವಸ್ಥಾನ ಅಭಿವೃದ್ಧಿಗೆ ಕೆಕೆಆರ್ಡಿಬಿಯಿಂದ 5 ಕೋಟಿ ಮೀಸಲಿಡಬೇಕು, ನಮ್ಮ ಸಮಾಜದ ಗುರುಗಳಾದ ವರಲಿಂಗೇಶ್ವರ ಸ್ವಾಮೀಜಿ ಹೆಸರಿನಲ್ಲಿ ಕಲ್ಬುರ್ಗಿಯಲ್ಲಿ 10 ಎಕರೆ ಭೂಮಿ ಸರ್ಕಾರ ಖರೀದಿಸಿ 5 ಕೋಟಿ ಮೀಸಲಿಡಬೇಕು, 25ರಂದು ನಡೆಯುವ ಸಮಾವೇಶ ಏಕ ಪಕ್ಷೀಯವಲ್ಲ ಸಮಾಜದ ಎಲ್ಲ ಮುಖಂಡರ ನಿರ್ಧಾರವಾಗಿದೆ.

- ತಿಪ್ಪಣ್ಣ ಕಮಕನೂರ್‌, ಎಂಎಲ್‌ಸಿ, ಕಲಬುರಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ವಿರುದ್ಧ ಪಾದಯಾತ್ರೆ: ಸಂಸದ ಡಾ.ಕೆ.ಸುಧಾಕರ್‌
ಗೃಹ ಬಳಕೆ ಸಿಲಿಂಡರ್‌ ಅಕ್ರಮ