ಕನ್ನಡಪ್ರಭ ವಾರ್ತೆ ಬೆಂಗಳೂರು
ಐನೂರು ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲ ಬೇಧಿಸಿರುವ ಕುಂಬಳಗೋಡು ಠಾಣೆ ಪೊಲೀಸರು ಚೆನ್ನೈ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.ಪಿರಿಯಾಪಟ್ಟಣ ನಿವಾಸಿ ಅರವಿಂದ್ (35) ಮತ್ತು ಚೆನ್ನೈ ಮೂಲದ ರವಿಸುಬ್ರಹ್ಮಣ್ಯ(34) ಬಂಧಿತರು. ಆರೋಪಿಗಳಿಂದ ₹3.29 ಲಕ್ಷ ಮೌಲ್ಯದ ₹500 ಮುಖ ಬೆಲೆಯ 338 ನಕಲಿ ನೋಟುಗಳು, ಜೆರಾಕ್ಸ್ ಯಂತ್ರ, ಲ್ಯಾಪ್ಟಾಪ್, ಕಾರು ಹಾಗೂ ಮೂರು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಸುಮಾರು ಆರೇಳು ತಿಂಗಳಿಂದ ಈ ದಂಧೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಅರವಿಂದ್ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದ್ದು, ಮತ್ತೊಬ್ಬ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಒಂದು ವರ್ಷದ ಹಿಂದೆ ಇಬ್ಬರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆಯೇ ಅಕ್ರಮ ಹಣ ದಂಧೆ ಬಗ್ಗೆ ಸಂಚು ರೂಪಿಸಿದ್ದರು. ಸುಮಾರು ಹತ್ತು ತಿಂಗಳ ಹಿಂದೆ ಅರವಿಂದ್ ಕುಂಬಳಗೋಡು ಬಳಿಯ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಖರೀದಿಸಿ ವಾಸವಾಗಿದ್ದ. ಅಲ್ಲಿಯೇ ಜೆರಾಕ್ಸ್ ಯಂತ್ರ ಹಾಗೂ ಲ್ಯಾಪ್ಟಾಪ್ ಮೂಲಕ ನಕಲಿ ₹500 ಮುಖಬೆಲೆಯ ನೋಟುಗಳನ್ನು ತಯಾರಿಸುತ್ತಿದ್ದ. ನಂತರ ಅವುಗಳನ್ನು ಚೆನ್ನೈನಲ್ಲಿರುವ ಸ್ನೇಹಿತ ರವಿಸುಬ್ರಹ್ಮಣ್ಯಗೆ ಕಳುಹಿಸುತ್ತಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅರವಿಂದ್ನನ್ನು ಕೆಂಚನಪುರ ಕ್ರಾಸ್ ಬಳಿ ಕೆಲ ದಿನಗಳ ಹಿಂದೆ ಬಂಧಿಸಿದ್ದರು. ನಂತರ ಈತ ನೀಡಿದ ಮಾಹಿತಿ ಮೇರೆಗೆ ಚೆನ್ನೈನ ಮಾರುತಿನಗರದಲ್ಲಿ ಆರೋಪಿ ರವಿಸುಬ್ರಹ್ಮಣ್ಯನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶೇ.70-30 ಹಂಚಿಕೊಳ್ಳುತ್ತಿದ್ದರು:
ಆರೋಪಿಗಳ ಪೈಕಿ ಅರವಿಂದ್ ಖೋಟಾ ನೋಟುಗಳನ್ನು ತಯಾರಿಸಿ ಚೆನ್ನೈಗೆ ಕಳುಹಿಸುತ್ತಿದ್ದ. ಈತ ತನ್ನದೇ ಜಾಲದ ಮೂಲಕ ಖೋಟಾ ನೋಟುಗಳ ಮಾರಾಟ ಮಾಡುತ್ತಿದ್ದ. ಬಂದ ಲಾಭದಲ್ಲಿ ಶೇ.30ರಷ್ಟು ಅರವಿಂದ್, ಶೇ.70ರಷ್ಟು ರವಿಸುಬ್ರಹ್ಮಣ್ಯ ಹಣ ಹಂಚಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.