ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಕೊಲ್ಲೂರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಇತರ ಧಾರ್ಮಿಕ, ಪ್ರವಾಸಿ ತಾಣಗಳ ಕುರಿತ ಅಭಿವೃದ್ಧಿಯ ‘ಕೊಲ್ಲೂರು ರಿಜನಲ್ ಸರ್ಕ್ಯೂಟ್’ ಯೋಜನೆಯ ಪಿಪಿಟಿಯನ್ನು ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಐತಿಹಾಸಿಕ, ಧಾರ್ಮಿಕ ಮಹತ್ವವಿರುವ ಪುಣ್ಯಕ್ಷೇತ್ರ ಕೊಲ್ಲೂರನ್ನು ದೇಶದ ಪ್ರಮುಖ ಪ್ರವಾಸಿತಾಣವನ್ನಾಗಿ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.ಅವರು ಗುರುವಾರ ಸಂಜೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಕೊಲ್ಲೂರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಇತರ ಧಾರ್ಮಿಕ, ಪ್ರವಾಸಿ ತಾಣಗಳ ಕುರಿತ ಅಭಿವೃದ್ಧಿಯ ‘ಕೊಲ್ಲೂರು ರಿಜನಲ್ ಸರ್ಕ್ಯೂಟ್’ ಯೋಜನೆಯ ಪಿಪಿಟಿಯನ್ನು ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಸ್ಥಳೀಯ ಸಂಸದರು ಹಾಗೂ ಶಾಸಕರೊಂದಿಗೆ ಇಲ್ಲಿನ ಅಗತ್ಯಗಳ ಬಗ್ಗೆ ಚರ್ಚಿಸಿ, ಈ ಯೋಜನೆಯನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸುವುದಾಗಿ ಅವರು ಭರವಸೆ ನೀಡಿಸಿದರು.ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಪ್ರವಾಸೋದ್ಯಮ ಆಯುಕ್ತ ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಚಿವರನ್ನು ದೇವಾಲಯದ ವತಿಯಿಂದ ಗೌರವಿಸಲಾಯಿತು.
------------------290 ಕೋಟಿ ರು.ಗಳ ಯೋಜನೆ
ಬೆಂಗಳೂರಿನ ಖಾಸಗಿ ವಿನ್ಯಾಸ ಸಂಸ್ಥೆಯ ಸೌಮ್ಯ ಅವರು ಯೋಜನೆಯ ಬಗ್ಗೆ ವಿವರಗಳನ್ನು ನೀಡಿ, ಯೋಜನೆಯಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಿದೆ. ಇಕೋ ಪ್ರಾವಾಸೋದ್ಯಮಕ್ಕೆ ಪೂರಕವಾಗಿ, ಹೋಟೇಲ್, ಸ್ನಾನಘಟ್ಟ, ಪಾರಂಪರಿಕ ಮಾದರಿಯ ಕಟ್ಟಡ ವಿನ್ಯಾಸಗೊಳಿಸಲಾಗುತ್ತದೆ ಎಂದರು.ಪ್ರಥಮ ಹಂತದಲ್ಲಿ ಕೊಲ್ಲೂರು ಮೂಲಸೌಕರ್ಯ ಅಭಿವೃದ್ಧಿಗೆ 26.5 ಕೋಟಿ ರು., 2ನೇ ಹಂತದಲ್ಲಿ ಬೈಂದೂರು, ಸೋಮೇಶ್ವರಗಳಲ್ಲಿ ಬೀಚ್ ಪ್ರವಾಸೋದ್ಯಮದ ಅಭಿವೃದ್ಧಿಗೆ 100 ಕೋಟಿ ರು., 3ನೇ ಹಂತದಲ್ಲಿ ಅಪೂರ್ವ ಮರವಂತೆ ಕಿನಾರೆಯಲ್ಲಿ ಸ್ಕೈಡೆಕ್ ರೆಸ್ಟೋರೆಂಟ್ ನಿರ್ಮಾಣ ಸೇರಿದಂತೆ 40 ಕೋಟಿ ರು. ಹಾಗೂ ಇತರ ಸಲೌಭ್ಯಗಳು ಸೇರಿ ಒಟ್ಟು ಒಟ್ಟು 290 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.