ಕೊಲ್ಲೂರು ದೇವಸ್ಥಾನದ ಹಣ ಸರ್ಕಾರಕ್ಕೆ ಹೋಗಿಲ್ಲ: ಕೆ.ಬಾಬು ಶೆಟ್ಟಿ ಸ್ಪಷ್ಟನೆ

KannadaprabhaNewsNetwork |  
Published : Jul 18, 2025, 12:45 AM IST
ಬಾಬು ಶೆಟ್ಟಿ | Kannada Prabha

ಸಾರಾಂಶ

ದೇವಸ್ಥಾನದ ಆದಾಯದಿಂದ ದೇವಳದ ದೈನಂದಿನ ಖರ್ಚು, ವಾರ್ಷಿಕ ಜಾತ್ರೆ, ಅಭಿವೃದ್ಧಿ ಕೆಲಸ, ಸಿಬ್ಬಂದಿ ವೆಚ್ಚ, ಭಕ್ತರಿಗೆ ಉಚಿತ ಅನ್ನಸಂತರ್ಪಣೆ, ಭಕ್ತರ ಮೂಲಸೌಕರ್ಯದ ಬಗ್ಗೆ, ಗೋಶಾಲೆ ನಿರ್ವಹಣೆ, ದೇವಸ್ಥಾನಕ್ಕೆ ಸೇರಿದ 5 ಪ್ರೌಢಶಾಲೆ ಮತ್ತು 1 ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಉಚಿತ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ, ಇತ್ಯಾದಿಗಳಿಗೆ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಹಾಗೂ ದೇವಸ್ಥಾನದ ಪರವಾಗಿ ಸ್ಪಷ್ಟನೆ ನೀಡಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಭಂಡಾರದಿಂದ ಸರ್ಕಾರಕ್ಕೆ ಯಾವುದೇ ಹಣವನ್ನು ಸಂದಾಯ ಮಾಡಿರುವುದಿಲ್ಲ. ದೇವಸ್ಥಾನದ ಆವರಣದ ಮುಂಭಾಗದಲ್ಲಿ ಹಾದು ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿದ್ದು, ಇದರ ನಿರ್ವಹಣೆ ಜವಾಬ್ದಾರಿಯೂ ದೇವಸ್ಥಾನದ್ದಾಗಿರುವುದಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆದಾಯ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೋಗಿದೆ ಮತ್ತು ಕೊಲ್ಲೂರು ದೇವಸ್ಥಾನದ ಆವರಣದಲ್ಲಿ ರಸ್ತೆ ಗುಂಡಿ ಮುಚ್ಚಲು ಯೋಗ್ಯತೆಯಿಲ್ಲದ ನಿಮ್ಮ ಸರ್ಕಾರಕ್ಕೆ, ದೇವಸ್ಥಾನದ ಹುಂಡಿ ಹಣ ಯಾಕೆ ಬೇಕು ಎಂದು ಕರಾವಳಿ ಬಿಜೆಪಿ ಕಾರ್ಯಕರ್ತರ ಬಹಿರಂಗ ಸವಾಲಿಗೆ ಅವರು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಧಾರ್ಮಿಕ ದತ್ತಿ ಇಲಾಖೆಗೆ‌ ಸೇರಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ‘ಎ’ ವರ್ಗದ ದೇವಸ್ಥಾನವಾಗಿದ್ದು, ರಾಜ್ಯದಲ್ಲಿ 2ನೇ ಶ್ರೀಮಂತ ದೇವಸ್ಥಾನವಾಗಿದೆ. 2023-24ರಲ್ಲಿ ಆದಾಯ ₹68,23,06,285.09, ವೆಚ್ಚ ₹41,63,93,569.28 ಹಾಗೂ ಉಳಿತಾಯ ₹26,59,12,715.81 ಆಗಿದೆ. 2024-25ರಲ್ಲಿ ಆದಾಯ ₹71,93,37,864.66, ವೆಚ್ಚ ₹40,58,19,652.63 ಉಳಿತಾಯ ₹31,35,18,212.03 ಇದೆ. ಕಳೆದ ಎರಡು ವರ್ಷಗಳಲ್ಲಿ ದೇವಳದ ಉಳಿತಾಯ ₹ 57,94,30,927.84 ಆಗಿದ್ದು, ಈ ಹಣವನ್ನು ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿರಖು ಠೇವಣಿಯಲ್ಲಿ ತೊಡಗಿಸಲಾಗಿದೆ. ಪ್ರಸ್ತುತ ದೇವಸ್ಥಾನದ ಹೆಸರಿನಲ್ಲಿ ನಿರಖು ಠೇವಣಿಯಲ್ಲಿ ತೊಡಗಿಸಿದ ಮೊತ್ತ ₹212 ಕೋಟಿ ಆಗಿದೆ ಎಂದು ತಿಳಿಸಿದ್ದಾರೆ.ದೇವಸ್ಥಾನದ ಆದಾಯದಿಂದ ದೇವಳದ ದೈನಂದಿನ ಖರ್ಚು, ವಾರ್ಷಿಕ ಜಾತ್ರೆ, ಅಭಿವೃದ್ಧಿ ಕೆಲಸ, ಸಿಬ್ಬಂದಿ ವೆಚ್ಚ, ಭಕ್ತರಿಗೆ ಉಚಿತ ಅನ್ನಸಂತರ್ಪಣೆ, ಭಕ್ತರ ಮೂಲಸೌಕರ್ಯದ ಬಗ್ಗೆ, ಗೋಶಾಲೆ ನಿರ್ವಹಣೆ, ದೇವಸ್ಥಾನಕ್ಕೆ ಸೇರಿದ 5 ಪ್ರೌಢಶಾಲೆ ಮತ್ತು 1 ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಉಚಿತ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ, ಇತ್ಯಾದಿಗಳಿಗೆ ವೆಚ್ಚಗಳನ್ನು ಭರಿಸಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಹಾಗೂ ದೇವಸ್ಥಾನದ ಪರವಾಗಿ ಸ್ಪಷ್ಟನೆ ನೀಡುತ್ತಿದ್ದು, ಇದೇ ರೀತಿ ಅನಗತ್ಯವಾಗಿ ಕ್ಷೇತ್ರದ ವಿರುದ್ಧ ಆಧಾರವಿಲ್ಲದೆ ಸಾಮಾಜಿತ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು, ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಳ್ಳುವುದಾಗಿ ಕೆ.ಬಾಬು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!