ಕೊಪ್ಪಳ: ಕೊಪ್ಪಳ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರು ಅವಧಿ ಇನ್ನೂ ಐದು ತಿಂಗಳುಗಳ ಕಾಲ ಇದೆ ಎಂದು ಧಾರವಾಡ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
2026 ಏ.27 ವರೆಗೂ ಕೊಪ್ಪಳ ನಗರಸಭೆ ಅಧ್ಯಕ್ಷ,ಉಪಾಧ್ಯಕ್ಷರು ಹಾಗೂ ಸದಸ್ಯರು ಎಂದಿನಂತೆ ಕಾರ್ಯ ನಿರ್ವಹಿಸಿ ಆಡಳಿತ ಮಾಡುವ ಕುರಿತು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಏನಿದು ಸಮಸ್ಯೆ:ಕೊಪ್ಪಳ ನಗರಸಭೆ ಸೇರಿದಂತೆ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳೇ ಆಡಳಿತಾಧಿಕಾರಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಆದರೆ, ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವಧಿ ಇನ್ನೂ ಮುಂಗಿದಿಲ್ಲ. ನಮ್ಮ ಅವಧಿಯ ಆಡಳಿತ ಐದು ವರ್ಷ ಆಗಿಯೇ ಇಲ್ಲ ಎಂದು ಧಾರವಾಡ ಹೈಕೋರ್ಟಿನಲ್ಲಿ ರಿಟ್ ಆರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಎರಡು ಬಾರಿ ತಡೆಯಾಜ್ಞೆ ನೀಡಿದೆ. ಆದರೆ, ಮಂಗಳವಾರ ಈ ಕುರಿತು ಅಂತಿಮ ತೀರ್ಪು ನೀಡಿ, ಅವಧಿಯೇ 2026 ಏ. 27 ವರೆಗೂ ಇದ್ದು, ಅಲ್ಲಿಯವರೆಗೂ ಆಡಳಿತಾಧಿಕಾರಿ ನೇಮಕ ಮಾಡುವಂತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.ಕೊಪ್ಪಳ ನಗರಸಭೆ ಸದಸ್ಯರ ಆಯ್ಕೆಯಾಗಿ ಎರಡು ವರ್ಷಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ 29.10.2020 ರಂದು ನಡೆಯಿತು. ಆಯ್ಕೆ ಪ್ರಕ್ರಿಯೇ ಮುಗಿದು ಇನ್ನೇನು ಘೋಷಣೆಯಾಗಬೇಕಾಗಿತ್ತು, ಆಗ ಸುಪ್ರೀಮ್ ಕೋರ್ಟ್ ನಲ್ಲಿದ್ದ ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಲಾಯಿತು. ಹೀಗಾಗಿ, ಮತ್ತೆ ಈ ಸಮಸ್ಯೆ ಹೀಗೆ ಕಾಲದೂಡತ್ತಾ 2021 ಏ.27 ರಂದು ಅಧಿಕೃತ ಘೋಷಣೆಯಾಗಿ, ಮೊದಲ ಸಭೆ ನಡೆಯಿತು.
ನನಗೆ ಸಿಗಬೇಕಾದ ನ್ಯಾಯ ಸಿಕ್ಕಿದೆ. ನಾನು ಅಧಿಕಾರ ವಹಿಸಕೊಂಡು ಕೇವಲ ಹದಿನೈದು ತಿಂಗಳು ಮಾತ್ರ ಆಗಿದೆ. ಹೀಗಾಗಿ, ಅಂದುಕೊಂಡಿದ್ದನ್ನು ಮಾಡಲು ಆಗಿರಲಿಲ್ಲ. ಆಗ ನ್ಯಾಯಾಲಯ ನಮಗೆ 2026 ಏ.27 ವರೆಗೂ ಅವಕಾಶ ನೀಡಿದೆ. ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಭಾಗ್ಯ ಸಿಕ್ಕಂತಾಗಿದೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ತಿಳಿಸಿದ್ದಾರೆ.