ಕನ್ನಡಪ್ರಭ ವಾರ್ತೆ ಮೂಲ್ಕಿ
ಹಕ್ಕುಪತ್ರಕ್ಕಾಗಿ ಮೂಲ್ಕಿ ತಾಲೂಕು ಆಡಳಿತ ಸೌಧದ ಮುಂಭಾಗ ಮೂರು ದಿನಗಳ ಕಾಲ ಟೆಂಟ್ ಹಾಕಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ 30 ಕೊರಗ ಕುಟುಂಬಗಳ ಸದಸ್ಯರು ಶಾಸಕ ಉಮಾನಾಥ ಎ.ಕೋಟ್ಯಾನ್ ಮಧ್ಯಸ್ಥಿಕೆಯಿಂದ ಧರಣಿ ಮುಕ್ತಾಯಗೊಳಿಸಿದ್ದಾರೆ. ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ನೆತೃತ್ವದಲ್ಲಿ ಭೂಮಿಯ ಹಕ್ಕುಪತ್ರಕ್ಕಾಗಿ 30ಕೊರಗ ಕುಟುಂಬಗಳು ಸೆ.18ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದು ಜಿಲ್ಲಾಡಳಿತ ಸಹಿತ ತಾಲೂಕು ತಹಸೀಲ್ದಾರರು, ಐಟಿಡಿಪಿ ಅಧಿಕಾರಿಗಳು ಧರಣಿ ನಿರತರ ಮನವೊಲಿಸಲು ಸತತ ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ, ಮಾಹಿತಿ ತಿಳಿದ ಶಾಸಕ ಉಮಾನಾಥ ಎ. ಕೋಟ್ಯಾನ್ ಧರಣಿನಿರತರ ಮನ ಒಲಿಕೆಗೆ ಪ್ರಯತ್ನಿಸಿದ್ದರು.ಕೊಲ್ಲೂರುಪದವು ಬಳಿ ಮಂಜೂರಾದ 7.04 ಎಕರೆ ಜಮೀನನ್ನು 3 ತಿಂಗಳ ಒಳಗೆ ಸಮತಟ್ಟುಗೊಳಿಸಿ ಎಲ್ಲ 30 ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಮನೆ ಕಟ್ಟಿಕೊಡಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ಆಶ್ವಾಸನೆ ನೀಡಿದರು. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ತಕ್ಷಣ ಯಾವುದೇ ಆಶ್ವಾಸನೆ ನೀಡಲಾಗದು ಎಂದವರು ಹೇಳಿದರು. ಆರಂಭದಲ್ಲಿ ಶಾಸಕರ ಮನವಿಯನ್ನು ತಿರಸ್ಕರಿಸಿ ಹಕ್ಕುಪತ್ರ ದೊರೆಯಲು ಎಷ್ಟೇ ಸಮಯವಾದರೂ ಚಿಂತಿಲ್ಲ. ನಾವು ಅಲ್ಲಿತನಕ ಧರಣಿ ಮುಂದುವರಿಸುತ್ತೇವೆ ಎಂದು ಧರಣಿ ನಿರತರು ಪಟ್ಟು ಹಿಡಿದರು.
ಸತತ ಪ್ರಯತ್ನದ ಬಳಿಕ 3 ತಿಂಗಳೊಳಗೆ ಹಕ್ಕುಪತ್ರ ದೊರೆಯದಿದ್ದಲ್ಲಿ ನನ್ನ ಮನೆ ಮುಂದೆಯೇ ಧರಣಿ ನಡೆಸಿ ಎಂದು ಶಾಸಕರು ಹೇಳಿದಾಗ, ಎಲ್ಲ ಕುಟುಂಬಗಳು ಪ್ರತ್ಯೇಕ ಸಭೆ ನಡೆಸಿ ಧರಣಿ ಮುಕ್ತಾಯಕ್ಕೆ ಸಮ್ಮತಿಸಿದರು.ಈ ಸಂದರ್ಭ ಮಾಧ್ಯಮ ಜತೆಗೆ ಮಾತನಾಡಿದ ಕೆ. ಪುತ್ರನ್, ಶಾಸಕರ ಮನವಿಗೆ ಮಣಿದಿದ್ದೇವೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಭಿವೃದ್ಧಿಗೆ ತೊಡಕಗಿದೆ. ಚುನಾವಣೆ ಮುಗಿದ ತಕ್ಷಣ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಮ್ಮ ಧರಣಿಯನ್ನು ಮುಂದೂಡುತ್ತಿದ್ದೇವೆ ಎಂದರು.
ಚುನಾವಣೆ ಮುಗಿದ ತಕ್ಷಣ ಶಾಸಕರ ಬಳಿಗೆ ತೆರಳಿ ನಮ್ಮ ಸಮಸ್ಯೆಗೆ ಬಗ್ಗೆ ಮಾತನಾಡುತ್ತೇವೆ. ಬಳಿಕವೂ ನಮ್ಮ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಮತ್ತೆ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಎಂದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮುಖರಾದ ಸುನಿಲ್ ಆಳ್ವ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಪುತ್ತುಬಾವ, ವಿಠಲ ಎನ್.ಎಂ., ಪ್ರಶಾಂತ್ ಬಸವರಾಜ್ ಜಾಂಬೂರ, ಸುನಿಲ್ ಇಟಗ, ಪ್ರಶಾಂತ್, ಶ್ಯಾಂಪ್ರಸಾದ್ ಪಡುಪಣಂಬೂರು, ಧರಣಿ ನಿರತರ ಪೈಕಿ, ಸುಂದರ ಗುತ್ತಕಾಡು, ಕೆ.ಪುತ್ರನ್, ಸುಶೀಲಾ, ನರಸಿಂಹ, ಸುಪ್ರಿಯಾ ಮತ್ತಿತರರಿದ್ದರು.