ಶ್ರೀಶೈಲ ಮಠದ
ಸುದೀರ್ಘ 40 ವರ್ಷಗಳ ಬಳಿಕ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನದಿಂದ ಡಾ। ಪ್ರಭಾಕರ ಕೋರೆ ಕೆಳಗಿಳಿದಿದ್ದು, ನಿರ್ದೇಶಕ ಮಂಡಳಿಯ ಚುನಾವಣೆಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ದಿಢೀರನೆ ವಾಪಸ್ ಪಡೆದಿದ್ದಾರೆ.
1984ರಲ್ಲಿ ನಿರ್ದೇಶಕರಾಗಿ ಕೆಎಲ್ಇಗೆ ಕಾಲಿಟ್ಟ ಡಾ। ಪ್ರಭಾಕರ ಕೋರೆ, ನಂತರ ಕಾರ್ಯಾಧ್ಯಕ್ಷರಾಗಿ ಸಂಸ್ಥೆಯ ಹೊಣೆ ಹೊತ್ತರು. ಅವರು ಅಧಿಕಾರ ವಹಿಸಿಕೊಂಡಾಗ ಕೇವಲ 38 ಅಂಗ ಸಂಸ್ಥೆಗಳಿದ್ದ ಕೆಎಲ್ಇ, ಇಂದು 316 ಅಂಗ ಸಂಸ್ಥೆಗಳನ್ನು ಒಳಗೊಂಡ ಶೈಕ್ಷಣಿಕ ಮಹಾಸಂಸ್ಥೆಯಾಗಿ ಬೆಳೆದಿದೆ. ಬೆಳಗಾವಿಯಿಂದ ಆರಂಭವಾದ ಕೆಎಲ್ಇ ಜಾಲ ಇಂದು ಮಹಾರಾಷ್ಟ್ರ, ದೆಹಲಿ ಹಾಗೂ ದುಬೈವರೆಗೂ ವಿಸ್ತರಿಸಿದೆ.ಕೆಎಲ್ಇಗೆ ಮಹಿಳಾ ಸಾರಥ್ಯ?:
ಕೆಎಲ್ಇ ಸಂಸ್ಥೆಯ 14 ನಿರ್ದೇಶಕರ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದೆ. ನೂತನ ಅಧ್ಯಕ್ಷರಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಶಿವಲಿಂಗಪ್ಪ ತಟವಟಿ ಮರು ಆಯ್ಕೆಯಾಗಿದ್ದಾರೆ. ಅದರಂತೆ ಆಡಳಿತ ಮಂಡಳಿಯ ಸದಸ್ಯರಾಗಿ ಅಮಿತ ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಪ್ರೀತಿ ಕರಣ ದೊಡವಾಡ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಲ್ಲಿಕಾರ್ಜುನ ಚನಬಸಪ್ಪ ಕೊಳ್ಳಿ, ವಿಜಯ ಶ್ರೀಶೈಲಪ್ಪ ಮೆಟಗುಡ್ಡ, ಜಯಾನಂದ ಉರ್ಫ್ ರಾಜು ಮಹಾದೇವಪ್ಪ ಮುನವಳ್ಳಿ, ಮಂಜುನಾಥ ಶಂಕರಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರಣಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ ಹಾಗೂ ಅನೀಲ ವಿಜಯಬಸಪ್ಪ ಪಟ್ಟೇದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ। ಎಸ್.ಎಸ್.ಜಲಾಲಪುರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.